ತುಮಕೂರು: ಜಿಲ್ಲೆಯಲ್ಲಿ ಕೊರೊನಾಗೆ ಬಲಿಯಾಗುತ್ತಿರುವ ವೃದ್ಧರ ಸಂಖ್ಯೆ ಏರುತ್ತಲೇ ಇದೆ. ಶುಕ್ರವಾರವೂ 6 ಮಂದಿ ಮೃತಪಟ್ಟಿದ್ದು, ಇವರೆಲ್ಲರೂ 58 ವರ್ಷದ ಮೇಲ್ಪಟ್ಟವರೇ ಆಗಿದ್ದಾರೆ.
ಕಳೆದ ಒಂದು ತಿಂಗಳಿನಿಂದ ಪ್ರತಿದಿನವೂ ಸೋಂಕಿತರು ಜೀವ ಕಳೆದುಕೊಳ್ಳುತ್ತಿರುವುದು ಸಹಜವಾಗಿ ಎಲ್ಲರ ಆತಂಕಕ್ಕೆ ಕಾರಣವಾಗಿದೆ. ವೃದ್ಧರ ಪ್ರಾಣ ಉಳಿಸಲುವೈದ್ಯರು ಎಷ್ಟೇ ಚಿಕಿತ್ಸೆ, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರೂ ನಿತ್ಯ ಒಬ್ಬರಲ್ಲ ಒಬ್ಬರು ಪ್ರಾಣ ಕಳೆದುಕೊಳ್ಳುತ್ತಿರುವುದು ವೈದ್ಯರಿಗೆ ಸವಲಾಗಿ ಪರಿಣಮಿಸಿದೆ.
ಶುಕ್ರವಾರ ಮೃತಪಟ್ಟವರಲ್ಲಿ 4 ಮಂದಿ ಪುರುಷರು, ಇಬ್ಬರು ಮಹಿಳೆಯರಿದ್ದಾರೆ. ತುಮಕೂರು ನಗರ ಎಸ್ಐಟಿ ಬಡಾವಣೆಯ 78 ವರ್ಷದ ವೃದ್ಧೆ, ಶಾರದಾದೇವಿ ನಗರ ಬಡಾವಣೆಯ 72 ವರ್ಷದ ವೃದ್ಧ, ಪಿ.ಎಚ್.ಕಾಲೊನಿಯ 66 ವರ್ಷದ ವ್ಯಕ್ತಿ, 60 ವರ್ಷದ ಮಹಿಳೆ, ಕ್ಯಾತ್ಸಂದ್ರದ 67 ವರ್ಷದ ವ್ಯಕ್ತಿ, ಕುಣಿಗಲ್ ತಾಲ್ಲೂಕು ನಾಗಸಂದ್ರ ಎಡ್ಡಿಗೆರೆ ಗ್ರಾಮದ 58 ವರ್ಷದ ವ್ಯಕ್ತಿ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿರುವ ಬಗ್ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ದೃಢಪಡಿಸಿದೆ.
112 ಮಂದಿಗೆ ಸೋಂಕು: ಶುಕ್ರವಾರ ಹೊಸದಾಗಿ 112 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇವರಲ್ಲಿ 67 ಮಂದಿ ಪುರುಷರು, 45 ಮಂದಿ ಮಹಿಳೆಯರು ಇದ್ದಾರೆ. ಇವರಲ್ಲಿ 5 ವರ್ಷದೊಳಗಿನ 3 ಮಕ್ಕಳು, 60 ವರ್ಷ ಮೇಲ್ಪಟ್ಟ 24 ಮಂದಿ ಇದ್ದಾರೆ.
136 ಮಂದಿಗೆ ಗುಣಮುಖ: ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಿದಷ್ಟೇ ವೇಗವಾಗಿ ಸೋಂಕಿತರು ಗುಣಮುಖರಾಗುತ್ತಿರುವುದು ಕೊಂಚ ಮಟ್ಟಿಗೆ ಆತಂಕ ದೂರ ಮಾಡಿದೆ. ಜಿಲ್ಲೆಯಲ್ಲಿ ಶುಕ್ರವಾರ 136 ಮಂದಿ ಸೋಂಕಿತರು ಗುಣಮುಖರಾಗಿ ಮನೆಗೆ ಹಿಂದಿರುಗಿದ್ದಾರೆ. ಈವರೆಗೆ ಜಿಲ್ಲೆಯಲ್ಲಿ 2903 ಮಂದಿ ಗುಣಮುಖರಾಗಿದ್ದು, 950 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಾಲ್ಲೂಕು;ಇಂದಿನ ಸೋಂಕಿತರು (ಆ.21);ಒಟ್ಟು ಸೋಂಕಿತರು;ಮರಣ
ಚಿ.ನಾ.ಹಳ್ಳಿ;11;193;3
ಗುಬ್ಬಿ;10;240;6
ಕೊರಟಗೆರೆ;0;227;2
ಕುಣಿಗಲ್;3;393;9
ಮಧುಗಿರಿ;12;264;3
ಪಾವಗಡ;7;332;6
ಶಿರಾ;1;273;6
ತಿಪಟೂರು;13;301;6
ತುಮಕೂರು;48;1,528;82
ತುರುವೇಕೆರೆ;7;227;2
ಒಟ್ಟು;112;3,978;125
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.