ADVERTISEMENT

ಗ್ರಾಮದ ಮನೆ ಮನೆಗೆ ವೈದ್ಯರ ತಂಡ ಭೇಟಿ

ಮೊದಲ ದಿನ ಜಟ್ಟಿಅಗ್ರಹಾರ, ಬುಕ್ಕಪಟ್ಟಣ ಗ್ರಾ.ಪಂ. ವ್ಯಾಪ್ತಿ ತಪಾಸಣೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2021, 2:32 IST
Last Updated 1 ಜೂನ್ 2021, 2:32 IST
ಕೊರಟಗೆರೆ ತಾಲ್ಲೂಕಿನ ಬುಕ್ಕಪಟ್ಟಣ ಗ್ರಾಮದಲ್ಲಿ ಶಾಸಕ ಡಾ.ಜಿ. ಪರಮೇಶ್ವರ ನೇಮಿಸಿರುವ ವೈದ್ಯರ ತಂಡ ಸೋಂಕಿತರ ತಪಾಸಣೆ ನಡೆಸಿತು. ತಹಶೀಲ್ದಾರ್ ಬಿ.ಎಂ. ಗೋವಿಂದರಾಜು ಇದ್ದರು
ಕೊರಟಗೆರೆ ತಾಲ್ಲೂಕಿನ ಬುಕ್ಕಪಟ್ಟಣ ಗ್ರಾಮದಲ್ಲಿ ಶಾಸಕ ಡಾ.ಜಿ. ಪರಮೇಶ್ವರ ನೇಮಿಸಿರುವ ವೈದ್ಯರ ತಂಡ ಸೋಂಕಿತರ ತಪಾಸಣೆ ನಡೆಸಿತು. ತಹಶೀಲ್ದಾರ್ ಬಿ.ಎಂ. ಗೋವಿಂದರಾಜು ಇದ್ದರು   

ಕೊರಟಗೆರೆ: ಶಾಸಕ ಡಾ.ಜಿ. ಪರಮೇಶ್ವರ ಅವರು ಕ್ಷೇತ್ರದ ಜನರ ಅನುಕೂಲಕ್ಕಾಗಿ ತಮ್ಮ ಸ್ವಂತ ಖರ್ಚಿನಲ್ಲಿ ನೇಮಿಸಲಾಗಿರುವ ವೈದ್ಯರ ತಂಡ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಕೋವಿಡ್ ಸೋಂಕಿತರ ತಪಾಸಣೆ ನಡೆಸಿತು.

10 ಜನ ವೈದ್ಯರ ತಂಡದ ಜೊತೆಯಲ್ಲಿ ಸ್ಥಳೀಯ ಆಶಾ ಕಾರ್ಯಕರ್ತೆಯರು, ಕಂದಾಯ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು, ಸಿಬ್ಬಂದಿ ಅವರೊಂದಿಗೆ ಮನೆ ಮನೆಗೆ ತೆರಳಿ ಸೋಂಕಿತರ ತಪಾಸಣೆ ನಡೆಸಿ ಆತ್ಮಸ್ಥೈರ್ಯ ತುಂಬಿದರು. ಇದರೊಂದಿಗೆ ಅವಶ್ಯಕ ಇರುವಂತಹ ಹಾಗೂ ರೋಗ ಲಕ್ಷಣ ಕಂಡು ಬಂದವರಿಗೆ ಸ್ಥಳದಲ್ಲೆ ವೈದ್ಯಕೀಯ ಕಿಟ್ ನೀಡಿದರು. ರೋಗಿಯ ಪ್ರಥಮ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದವರಿಗೂ ಕಿಟ್ ನೀಡಲಾಯಿತು.

ಪ್ರಥಮ ಹಂತದಲ್ಲಿ ಜೂ 11ವರೆಗೆ ತಾಲ್ಲೂಕಿನಲ್ಲಿ ಎಲ್ಲಾ ಹೋಬಳಿಗಳು, ಆ ನಂತರ ಕೊರಟಗೆರೆ ಕ್ಷೇತ್ರದ ಕೋರ ಮತ್ತು ಪುರವಾರ ಹೋಬಳಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ತಿಳಿಸಿದರು.

ADVERTISEMENT

ಸೋಮವಾರ ಮೊದಲನೆಯದಾಗಿ ತಾಲ್ಲೂಕಿನ ಜಟ್ಟಿಅಗ್ರಹಾರ ಹಾಗೂ ಬುಕ್ಕಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ವೈದ್ಯರ ತಂಡ ತಪಾಸಣೆ ನಡೆಸಿತು.

ಸಿದ್ಧಾರ್ಥ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ರಾಜೇಶ್ ಯಶಸ್ ಮಾತನಾಡಿ, ತಾಲ್ಲೂಕಿನಲ್ಲಿ ಕೊರೊನಾ ಸೋಂಕಿತರ ಮನೆಗಳಿಗೆ ವೈದ್ಯರ ತಂಡ ಭೇಟಿ ನೀಡಿ ತಪಾಸಣೆ ನಡೆಸಿ ಅವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದೆ. ಇದರೊಂದಿಗೆ ಅವರ ಆಹಾರ ಮತ್ತು ಜೀವನಶೈಲಿ ಬಗ್ಗೆ ಅರಿವು ಮೂಡಿಸಿ, ವಿಶೇಷ ಮೆಡಿಕಲ್ ಕಿಟ್ ನೀಡುತ್ತಿದ್ದೇವೆ ಎಂದು ತಿಳಿಸಿದರು.

ಯಾವೊಬ್ಬ ಸೋಂಕಿತರಿಗೂ ಮಾತ್ರೆ ಮತ್ತು ಇನ್ನಿತರ ಔಷಧಿ ಸಾಮಗ್ರಿಗಳಿಗೆ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎನ್ನುವುದು ಪರಮೇಶ್ವರ್ ಅವರ ಆದೇಶವಾಗಿದೆ. ಅದಕ್ಕಾಗಿ ಪ್ರತಿ ಹಳ್ಳಿಗಳ ಸೋಂಕಿತರ ಮನೆಗಳಿಗೆ ಭೇಟಿ ನೀಡಿ ಈ ಸೇವೆ ಆರಂಭಿಸಲಾಗಿದೆ. ದಿನಕ್ಕೆ ಎರಡು ಗ್ರಾಮ ಪಂಚಾಯಿತಿಯಂತೆ ವೈದ್ಯರ ತಂಡ ಕರ್ತವ್ಯ ನಿರ್ವಹಿಸಲಿದೆ ಎಂದು ಮಾಹಿತಿ ನೀಡಿದರು.

ತಹಶೀಲ್ದಾರ್ ಬಿ.ಎಂ. ಗೋವಿಂದರಾಜು ಮಾತನಾಡಿ, ‘ಪರಮೇಶ್ವರ ಅವರ ಸೂಚನೆಯಂತೆ ಪ್ರತಿ ಹಳ್ಳಿಯ ಸೋಂಕಿತರ ಮನೆಗಳಿಗೆ ಸಿದ್ಧಾರ್ಥ ಸಂಸ್ಥೆಯ ವೈದ್ಯಕೀಯರ ತಂಡ ತಪಾಸಣೆಗೆ ಭೇಟಿ ನೀಡುತ್ತಿದೆ. ಈ ಕೆಲಸ ಅತ್ಯಂತ ಉತ್ತಮವಾಗಿದೆ. ಇದರಿಂದ ಕೊರೊನಾ ಸೋಂಕು ಇಳಿಕೆ ಮಾಡಲು ಸಾಧ್ಯವಾಗುತ್ತದೆ’ ಎಂದು ತಿಳಿಸಿದರು.

ಸೋಂಕಿತರಲ್ಲಿ ರೋಗದ ತೀವ್ರತೆ ಹೆಚ್ಚಾಗಿ ಕಂಡುಬಂದಲ್ಲಿ ತಕ್ಷಣ ಅವರನ್ನು ಸಾರ್ವಜನಿಕ ಆಸ್ಪತ್ರೆ ಮತ್ತು ಸಿದ್ಧಾರ್ಥ ವೈದ್ಯಕೀಯ ಆಸ್ಪತ್ರೆಗೆ ದಾಖಲು ಮಾಡಲಾಗುವುದು ಎಂದರು.

ತಾ.ಪಂ. ಇಒ ಎಸ್. ಶಿವಪ್ರಕಾಶ್, ಸಿದ್ಧಾರ್ಥ ಸಂಸ್ಥೆಯ ವೈದ್ಯಕೀಯ ತಂಡದ ಡಾ.ರಾಜೇಶ್, ಡಾ.ಭಾನುಶ್ರೀ, ಡಾ.ಕೀರ್ತನಾ, ಡಾ.ಚೈತ್ರಾ, ಡಾ.ನೂರಪ್, ಡಾ.ಮಣಿಕಂಠ, ಡಾ.ಸುಮಾಕರ್, ಡಾ.ನಾಗೇಂದ್ರ, ಡಾ.ಜಯಪ್ರಕಾಶ್, ಡಾ.ಮನಾಲಿ, ಗ್ರಾ.ಪಂ. ಸದಸ್ಯ ಕೆ.ಎಲ್. ಮಂಜುನಾಥ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.