ತುಮಕೂರು: ಸಮಾಜದ ಕೆಟ್ಟ ಪದ್ಧತಿಗಳ ವಿರುದ್ಧ, ಸಮಸ್ಯೆಗಳ ವಿರುದ್ಧ ನ್ಯಾಯಾಧೀಶರು ಮತ್ತು ವಕೀಲರು ಜತೆಯಾಗಿ ಹೋರಾಡಿದಾಗ ಸಮಾಜ ಸುಧಾರಣೆ ಆಗುತ್ತದೆ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಹಂಚಾಲೆ ಸಂಜೀವ್ ಕುಮಾರ್ ತಿಳಿಸಿದರು.
ಜಿಲ್ಲಾ ವಕೀಲರ ಸಂಘದಿಂದ ನಡೆದ ಸ್ವಾಗತ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಇಂದು ಬಹಳಷ್ಟು ಅಂಗನವಾಡಿ ಕೇಂದ್ರಗಳ ಸ್ಥಿತಿ ಬಹಳ ಕೆಟ್ಟದಾಗಿದೆ. ಅವುಗಳನ್ನು ಸುಧಾರಿಸುವತ್ತ ಗಮನ ಹರಿಸಬೇಕು. ವಕೀಲರು ಮತ್ತು ನ್ಯಾಯಾಧೀಶರ ಮೇಲೆ ಇಂತಹ ಸುಧಾರಣೆಯ ಗುರುತರ ಜವಾಬ್ದಾರಿ ಇದೆ. ಹೋರಾಟದ ವೇದಿಕೆಯಾಗಿ ನ್ಯಾಯಾಲಯವನ್ನು ಬಳಸಿಕೊಳ್ಳಿ. ಸಮಾಜದಲ್ಲಿ ವಕೀಲರ ಪಾತ್ರ ದೊಡ್ಡದು ಎಂದರು.
ಅಧ್ಯಕ್ಷತೆವಹಿಸಿದ್ದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಜೆ.ಕೆ.ಅನಿಲ್, ‘ಜನರಿಗೆ ನ್ಯಾಯದಾನ ನೀಡುವಲ್ಲಿ ವಕೀಲರು ಮತ್ತು ನ್ಯಾಯಾಧೀಶರ ಸಂಬಂಧ ಮುಖ್ಯವಾದುದು. ಇಂದು ಜಗತ್ತಿನ ಜನರೆಲ್ಲರೂ ನ್ಯಾಯಾಲಯದತ್ತ ನೋಡುತ್ತಿದ್ದಾರೆ. ಉತ್ತಮ ನ್ಯಾಯ ಒದಗಿಸುವಲ್ಲಿ ವಕೀಲರ ಸಹಕಾರ ಅಗತ್ಯ. ನೂತನ ನ್ಯಾಯಾಧೀಶರಿಗೆ ಅಗತ್ಯ ಸಹಕಾರ ನೀಡುವುದು ನಮ್ಮ ಕರ್ತವ್ಯ’ ಎಂದು ಹೇಳಿದರು.
ವಕೀಲರ ಸಂಘದ ಉಪಾಧ್ಯಕ್ಷ ಹರೀಶ್ ಬಾಬು, ಜಂಟಿ ಕಾರ್ಯದರ್ಶಿ ಎನ್.ಆರ್.ಲೋಕೇಶ್, ಪ್ರಧಾನ ಕಾರ್ಯದರ್ಶಿ ಬಿ.ಆರ್.ದೇವರಾಜು ಇದ್ದರು.
ವಕೀಲ ನರಸಿಂಹಮೂರ್ತಿ ಪ್ರಾರ್ಥಿಸಿದರು. ಬಿ.ಆರ್.ದೇವರಾಜು ನಿರೂಪಿಸಿದರು. ಸಿ.ಸುರೇಶ್ ಕುಮಾರ್ ಸ್ವಾಗತಿಸಿದರು. ಎಂ.ಎನ್.ಜಗದೀಶ್ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.