ತಿಪಟೂರು: ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್, ರಾಜ್ಯ ರೈತ ಸಂಘ, ಹಸಿರು ಸೇನೆ ಸಹಯೋಗದಲ್ಲಿ ಜೂನ್ 7 ಮತ್ತು 08 ರಂದು ನಗರದ ಕಲ್ಪತರು ಪದವಿಪೂರ್ವ ಕಾಲೇಜು ಸಭಾಂಗಣದಲ್ಲಿ ಕೃಷಿ ಸಾಹಿತ್ಯ ಸಮ್ಮೇಳನ ಹಾಗೂ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದು ಕಸಾಪ ತಾಲ್ಲೂಕು ಅಧ್ಯಕ್ಷ ಬಸವರಾಜಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಈಗಾಗಲೇ ಮಕ್ಕಳ ಸಾಹಿತ್ಯ ಸಮ್ಮೆಳನ, ಮಹಿಳಾ ಸಾಹಿತ್ಯ ಸಮ್ಮೇಳನ, ಹೋಬಳಿ ಸಾಹಿತ್ಯ ಸಮ್ಮೇಳನಗಳನ್ನು ನಡೆಸಿದ್ದು, ಈ ಬಾರಿ ವಿನೂತನವಾಗಿ ಕೃಷಿ ಸಾಹಿತ್ಯ ಸಮ್ಮೇಳನ ಹಾಗೂ ಸಮ್ಮೇಳನದ ಅಂಗವಾಗಿ ಕೃಷಿ ವಿಚಾರ ಸಂಕಿರಣ ನಡೆಸಲಾಗುತ್ತಿದೆ ಎಂದರು.
7ರಂದು ಬೆಳಗ್ಗೆ 10.30ಕ್ಕೆ ಶಾಸಕ ಕೆ.ಷಡಕ್ಷರಿ ಉದ್ಘಾಟನೆ ನೆರವೇರಿಸಲಿದ್ದಾರೆ.
ಸಮ್ಮೇಳನದಲ್ಲಿ ಐದು ಗೋಷ್ಠಿಗಳು ನಡೆಯಲಿವೆ. ದೊಡ್ಡ ಹೊಸೂರಿನ ಮಂಜುನಾಥ್ ಗಾಂಧಿ ಸಹಜ ಬೇಸಾಯ ಶಾಲೆಯ ತೆಂಗು ಮತ್ತು ಅಡಿಕೆ-ವರ್ತಮಾನ ಮತ್ತು ಭವಿಷ್ಯ, ಸಂವಾದ, ಸಂತೆಶಿವರ ಬಸವರಾಜು ಅವರಿಂದ ‘ಬಹು ಬೆಳೆ ಪದ್ಧತಿ ನನ್ನ ಪ್ರಯೋಗಗಳು’ ಸಂವಾದ, ಶಿವನಂಜಪ್ಪ ಬಾಳೆಕಾಯಿ ಅವರಿಂದ ‘ಸಹಜ ಕೃಷಿಯ ನನ್ನ ಪ್ರಯೋಜನಗಳು’, ಬೆಂಗಳೂರು ಜಿಕೆವಿಕೆ ಕಾಲೇಜಿನ ಪ್ರಾಂಶುಪಾಲೆ ಸುಕನ್ಯ ಅವರಿಂದ ‘ಸಿರಿಧಾನ್ಯಗಳ ಉತ್ಪಾದನೆ ಸಂಸ್ಕರಣೆ, ವಿತರಣೆ, ಸಣ್ಣ ರೈತರ ಸಾಧ್ಯತೆಗಳು’ ಸಂವಾದ ನಡೆಯಲಿದೆ ಎಂದರು.
ಗೋಷ್ಠಿಯಲ್ಲಿ ಕಸಾಪ ಕಾರ್ಯದರ್ಶಿ ಶಂಕರಪ್ಪ, ಪ್ರಾಂಶುಪಾಲ ಶಿವಕುಮಾರ್, ಬಸವರಾಜು, ಚಂದ್ರಶೇಖರ್, ಗೋವಿಂದರಾಜು, ತಾಲ್ಲೂಕು ರೈತಸಂಘದ ಅಧ್ಯಕ್ಷ ಜಯಾನಂದಯ್ಯ, ನಿವೃತ್ತ ನೌಕರ ಸಂಘದ ಅಧ್ಯಕ್ಷ ಕೆ.ಎಂ.ರಾಜಣ್ಣ, ಸ್ವರ್ಣಗೌರಮ್ಮ, ಕಿಬ್ಬನಹಳ್ಳಿ ಹೊಬಳಿ ಅಧ್ಯಕ್ಷ ಶಂಕರಪ್ಪ ಬಳ್ಳೆಕಟ್ಟೆ ಉಪಸ್ಥಿತರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.