ಗುಬ್ಬಿ: ಸಹಕಾರಿ ಬ್ಯಾಂಕ್ ಮೂಲಕ ಸುಲಭ ಸಾಲ ಸೌಲಭ್ಯ ಲಭ್ಯವಾಗುವುದರಿಂದ ಅನೇಕ ಮಂದಿ ವ್ಯವಸಾಯ, ವ್ಯಾಪಾರ ಮತ್ತು ಉದ್ಯಮ ಸ್ಥಾಪಿಸಿ ಉತ್ತಮ ಜೀವನ ನಿರ್ವಹಿಸಲು ಸಾಧ್ಯವಾಗಿದೆ ಎಂದು ವಾಸವಿ ಪೀಠದ ಪೀಠಾಧ್ಯಕ್ಷ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದರು.
ಸೋಮವಾರ ಗುಬ್ಬಿ ಪಟ್ಟಣದಲ್ಲಿ ತುಮಕೂರು ಮರ್ಚೆಂಟ್ಸ್ ಕ್ರೆಡಿಟ್ ಕೋ-ಆಪರೇಟಿವ್ ಬ್ಯಾಂಕ್ನ 18ನೇ ಶಾಖೆ ಉದ್ಘಾಟಿಸಿದ ಮಾತನಾಡಿದರು. ಬ್ಯಾಂಕ್ನ ಎಲ್ಲ ಸದಸ್ಯರ ಸಹಕಾರದಿಂದಾಗಿ ಇತರ ರಾಜ್ಯಗಳಲ್ಲೂ ಶಾಖೆಗಳನ್ನು ತೆರೆಯಲು ಸಾಧ್ಯವಾಗಿದೆ ಎಂದರು.
ಗುಬ್ಬಿಯಂತಹ ಪಟ್ಟಣದಲ್ಲಿ ಬ್ಯಾಂಕ್ ಶಾಖೆ ತೆರೆಯುವ ಮೂಲಕ ವ್ಯಾಪಾರಿಗಳು ಮತ್ತು ಉದ್ಯಮಿಗಳಿಗೆ ಅನುಕೂಲ ಒದಗಿಸಲು ಮುಂದಾಗಿರುವುದು ಸ್ತುತ್ಯರ್ಹ ಬೆಳವಣಿಗೆ ಎಂದು ಸ್ವಾಮೀಜಿ ಅಭಿಪ್ರಾಯಪಟ್ಟರು.
ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಎಲ್ಲರನ್ನೂ ಒಟ್ಟುಗೂಡಿಸಿ ಸಹಕಾರಿ ಬ್ಯಾಂಕ್ ಕಟ್ಟಿ ಬೆಳೆಸುವುದು ಸಾಧಾರಣ ಕಾರ್ಯವಲ್ಲ. ಬ್ಯಾಂಕ್ ಹಣಕಾಸು ವ್ಯವಹಾರ ವೃದ್ಧಿಯಾಗುತ್ತಿರುವಂತೆ ಟಿಎಂಸಿಸಿ ಬ್ಯಾಂಕ್ ವಿವಿಧ ಸಾಮಾಜಿಕ ಕಾರ್ಯಗಳಿಗೆ ಲಾಭಾಂಶ ವಿನಿಯೋಗಿಸುತ್ತಿರುವುದು ಪ್ರಶಂಸನೀಯ ಎಂದರು.
ಬ್ಯಾಂಕ್ ಅಧ್ಯಕ್ಷ ಎನ್.ಎಸ್.ಜಯಕುಮಾರ್, ದೇಶದಲ್ಲೇ ಮೊದಲ ಬಾರಿಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಬ್ಯಾಂಕಿನ ವೆಬ್ಸೈಟ್ನಲ್ಲಿ ಅಗತ್ಯವಿರುವ ಎಲ್ಲಾ ಮಾಹಿತಿಗಳು ಲಭ್ಯವಿವೆ. ಗ್ರಾಹಕರು ವೆಬ್ಸೈಟ್ ಮೂಲಕವೇ ಮಾಹಿತಿ ಪಡೆದು ವ್ಯವಹಾರ ನಡೆಸಲು ಸಾಧ್ಯವಾಗುವಂತೆ ತಂತ್ರಜ್ಞಾನ ರೂಪಿಸಲಾಗಿದ ಎಂದರು.
ಶಾಸಕ ಎಸ್.ಆರ್.ಶ್ರೀನಿವಾಸ್ ಮತ್ತು ಜ್ಯೋತಿ ಗಣೇಶ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಬ್ಯಾಂಕ್ ನಿರ್ದೇಶಕ ಡಿ.ಎ.ಮೋಹನ್, ಎಂ.ಎಸ್. ನಾಗರಾಜಗುಪ್ತ, ಸಿ.ವಿ.ಸುರೇಶ್, ಉಮಾಶಂಕರ್, ಎಮ್.ಎಸ್.ಶಿವಶಂಕರ್ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.