ADVERTISEMENT

ಗುಡಿಬಂಡೆ: ರಸ್ತೆ ವಿಸ್ತರಣೆ ವೇಳೆ ಮನೆ ಕಳೆದುಕೊಂಡವರಿಗೆ ನಿವೇಶನ ಹಂಚಿಕೆ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2020, 10:57 IST
Last Updated 12 ಆಗಸ್ಟ್ 2020, 10:57 IST
ಗುಡಿಬಂಡೆ ಪಟ್ಟಣದ ಮುಖ್ಯರಸ್ತೆ ವಿಸ್ತರಣೆ ವೇಳೆ ಮನೆ ಕಳೆದುಕೊಂಡ 70 ಜನರಿಗೆ ನಿವೇಶನದ ಹಕ್ಕುಪತ್ರಗಳನ್ನು ಶಾಶಕ ಎನ್.ಎಸ್.ಸುಬ್ಬಾರೆಡ್ಡಿ ನೀಡಿದರು
ಗುಡಿಬಂಡೆ ಪಟ್ಟಣದ ಮುಖ್ಯರಸ್ತೆ ವಿಸ್ತರಣೆ ವೇಳೆ ಮನೆ ಕಳೆದುಕೊಂಡ 70 ಜನರಿಗೆ ನಿವೇಶನದ ಹಕ್ಕುಪತ್ರಗಳನ್ನು ಶಾಶಕ ಎನ್.ಎಸ್.ಸುಬ್ಬಾರೆಡ್ಡಿ ನೀಡಿದರು   

ಗುಡಿಬಂಡೆ: 5 ವರ್ಷಗಳ ಹಿಂದೆ ಪಟ್ಟಣದ ಮುಖ್ಯರಸ್ತೆ ವಿಸ್ತರಣೆ ವೇಳೆ ಮನೆ, ನಿವೇಶನ ಕಳೆದುಕೊಂಡ 280 ಜನರಲ್ಲಿ 70 ಜನರಿಗೆ ಲಾಟರಿ ಮೂಲಕ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ನಿವೇಶನವನ್ನು ಹಂಚಿಕೆ ಮಾಡಿದರು.

ಈ ವೇಳೆ ಮಾತನಾಡಿದ ಅವರು, ಮುಖ್ಯರಸ್ತೆಯ ವಿಸ್ತರಣೆ ವೇಳೆ ಅನೇಕರು ನಿವೇಶನಗಳನ್ನು ಕಳೆದುಕೊಂಡಿದ್ದರು. ನಿವೇಶನ ನೀಡಲು ಹಲವಾರು ನಿಯಮಗಳಿದ್ದ ಕಾರಣ ಇಷ್ಟು ತಡವಾಗಿ ಹಂಚಿಕೆ ಮಾಡಲಾಗಿದೆ. ಮುಖ್ಯರಸ್ತೆಯಲ್ಲಿ ಶೇ 100ರಷ್ಟು ಮನೆ ಕಳೆದುಕೊಂಡವರಿಗೆ ನಿವೇಶನ ಹಂಚಿಕೆ ಮಾಡಲಾಗಿದೆ. ಉಳಿದವರಿಗೂ ಡಿಸೆಂಬರ್ ತಿಂಗಳೊಳಗೆ ಹಂಚಿಕೆ ಮಾಡಲಾಗುವುದು. ಒಂದು ವೇಳೆ ಈ ಹಂಚಿಕೆಯಲ್ಲಿ ಲೋಪಗಳು ಕಂಡುಬಂದಲ್ಲಿ ಕೂಡಲೇ ತಹಶೀಲ್ದಾರ್ ಅಥವಾ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ದೂರು ನೀಡಿ. ಲೋಪ ಸಾಬೀತಾದಲ್ಲಿ ಅಂತವರಿಗೆ ನೀಡಲಾದ ನಿವೇಶನವನ್ನು ಕೂಡಲೇ ರದ್ದುಗೊಳಿಸಿ ಅರ್ಹರಿಗೆ ನೀಡಲಾಗುವುದು ಎಂದರು.

ಈಗಾಗಲೇ 280 ಜನರಿಗೆ ನೀವೇಶನ ನೀಡಲು ಬ್ರಾಹ್ಮಣರಹಳ್ಳಿಗೆ ಹೋಗುವ ವಿದ್ಯಾಗಿರಿ ಸಮೀಪ ಕಂದಾಯ ಇಲಾಖೆ ವ್ಯಾಪ್ತಿಗೆ ಬರುವ 9 ಎಕರೆ ಜಮೀನು ನೀಡಲಾಗಿದ್ದು, ಅದರಲ್ಲಿ 1 ಎಕರೆ 36 ಗುಂಟೆ ಜಮೀನು ಜಿಲ್ಲಾಧಿಕಾರಿಯಿಂದ ಅನುಮತಿ ಸಿಕ್ಕಿದೆ. 70 ಜನರಿಗೆ ನಿವೇಶನದ ಪತ್ರಗಳನ್ನು ನೀಡಲಾಗಿದೆ. ಈಗ ಜಾಗದಲ್ಲಿ ಕಲ್ಲು ಬಂಡೆ ಮಣ್ಣಿನ ದಿಬ್ಬುಗಳು ಇದ್ದು ಜಾಗವನ್ನು ಸಮ ಮಾಡಲು ಹಾಗೂ ಅಗತ್ಯ ಸವಲತ್ತುಗಳನ್ನು ಕಲ್ಪಿಸಲು ₹50 ಲಕ್ಷ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.

ADVERTISEMENT

ವಾಲ್ಮೀಕಿ ಭವನ ನಿರ್ಮಾಣಕ್ಕೆ ಜಾಗ ಗುರುತಿಸಿದ್ದು, ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಗಡಿಯನ್ನು ಸಹ ಗುರುತಿಸಿದೆ. ನೀಲ ನಕ್ಷೆ ತಯಾರಿಸಿ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ತಹಶೀಲ್ದಾರ್ ಡಿ.ಹನುಮಂತರಾಪ್ಪ, ಮಂಜುನಾಥ, ಪ.ಪಂ.ಮುಖ್ಯಾಧಿಕಾರಿ ರಾಜಶೇಖರ, ಗ್ರೇಡ್ 2 ತಹಶೀಲ್ದಾರ್ ಸಿಗಬತುಲ್ಲಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.