ಕುಣಿಗಲ್: ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಆದ್ಯತೆ ನೀಡುವ ಮೂಲಕ ಅಮೃತೂರು ಕರ್ನಾಟಕ ಪಬ್ಲಿಕ್ ಶಾಲೆ ಸುತ್ತಲಿನ 48 ಹಳ್ಳಿಗಳ ಪೋಷಕರು, ವಿದ್ಯಾರ್ಥಿಗಳ ಗಮನಸೆಳೆಯುತ್ತಿದೆ.
ಅಮೃತೂರು ಹೋಬಳಿ ಕೇಂದ್ರದಲ್ಲಿ 1942ರಲ್ಲಿ ಪ್ರಾರಂಭವಾದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 1950ರಲ್ಲಿ ಫ್ರೌಢಶಾಲೆ ವಿಭಾಗ, 1973ರಲ್ಲಿ ಕಾಲೇಜು ವಿಭಾಗ ಆರಂಭವಾಗಿತ್ತು. 2018-19ರಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಆಗಿ ಪರಿವರ್ತನೆಯಾಗಿದೆ.
ಸಾರಿಗೆ ಸೌಲಭ್ಯ ಕೊರತೆಯಾಗದ ಕಾರಣ ಸುತ್ತಲಿನ ಹಳ್ಳಿಗಳ ಮಕ್ಕಳು ಅಧಿಕ ಸಂಖ್ಯೆಯಲ್ಲಿ ದಾಖಲಾಗುತ್ತಿದ್ದಾರೆ. ನಾಲ್ಕು ಎಕರೆ ವಿಶಾಲ ಜಾಗದಲ್ಲಿ, ಒಂದೇ ಸೂರಿನಡಿ ಎಲ್ಕೆಜಿಯಿಂದ ದ್ವಿತೀಯ ಪಿಯುಸಿವರೆಗೂ ಆಂಗ್ಲ ಮತ್ತು ಕನ್ನಡ ಮಾದ್ಯಮದಲ್ಲಿ ವ್ಯಾಸಂಗಕ್ಕೆ ಅವಕಾಶವಿದೆ.
ಉತ್ತಮ ಶಿಕ್ಷಕ ವೃಂದ ಇರುವುದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಜತೆಗೆ ಕ್ರೀಡೆ, ಸಾಂಸ್ಕೃತಿಕ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಧನೆ ಮಾಡಿ ಜಿಲ್ಲೆ ಮತ್ತು ರಾಜ್ಯಮಟ್ಟದಲ್ಲಿ ಗಮನ ಸೆಳೆದಿದ್ದಾರೆ.
ಶಾಲೆ ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡುತ್ತಿದ್ದು, 2018-19ರಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಶೇ 76, 2019-20ರಲ್ಲಿ ಶೇ 87, 2020-21ರಲ್ಲಿ ಶೇ 100ರಷ್ಟು ಫಲಿತಾಂಶ ಸಾಧಿಸಿದ್ದಾರೆ.
ಕೇಂದ್ರ ಮಾನವ ಸಂಪನ್ಮೂಲ ಸಂಸ್ಥೆ ಆಯೋಜಿಸುವ ಎನ್ಎಂಎಂಎಸ್ (ನ್ಯಾಷನಲ್ ಮೀನ್ಸ್ ಕಮ್ ಮೆರಿಟ್ ಸ್ಕಾಲರ್ಶಿಪ್) ಪರೀಕ್ಷೆಯಲ್ಲಿ 2013-14 ಸಾಲಿನಿಂದ ಈವರೆಗೆ 59 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಉತ್ತೀರ್ಣರಾಗಿರುವ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ವರ್ಷಕ್ಕೆ ₹12 ಸಾವಿರದಂತೆ ನಾಲ್ಕು ವರ್ಷ ಒಟ್ಟು ₹48 ಸಾವಿರ ವಿದ್ಯಾರ್ಥಿ ವೇತನ ಪಡೆಯುತ್ತಿದ್ದಾರೆ. ಇದು ವಿದ್ಯಾರ್ಥಿಗಳು ಹಾಗೂ ಪೋಷಕರನ್ನು ಶಾಲೆಯತ್ತ ಆಕರ್ಷಿಸುತ್ತಿದೆ.
ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಳವಾದಂತೆ ಕೊಠಡಿಗಳ ಕೊರತೆ ಮನಗಂಡ ಶಿಕ್ಷಕರು ಓಸಾಟ್ ಸಂಸ್ಥೆಯ ಗಮನಸೆಳೆದಿದ್ದರು. ಈ ಸಂಸ್ಥೆಯು ₹40 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಮೂರು ಕೊಠಡಿ ಮತ್ತು ಬಾಲಕ, ಬಾಲಕಿಯರಿಗೆ ಎರಡು ಆಧುನಿಕ ಶೌಚಾಲಯ ನಿರ್ಮಿಸಿಕೊಟ್ಟಿದೆ.
ಶಾಲೆಯ ಕೊಠಡಿಯಲ್ಲಿ ಶೈಕ್ಷಣಿಕ ಪ್ರಗತಿಗೆ ಪೂರಕವಾದ ಚಿತ್ರಗಳನ್ನು ರಚಿಸಲಾಗಿದೆ. ಬೆಂಗಳೂರಿನ ಅವಿರತ ಸಂಸ್ಥೆಯವರು ಪ್ರತಿವರ್ಷ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಮತ್ತು ಲೇಖನ ಸಾಮಗ್ರಿ ವಿತರಿಸುತ್ತಿದ್ದಾರೆ. ಎಚ್.ಬಿ.ಗ್ಯಾಸ್ನಿಂದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹತ್ತು ಕಂಪ್ಯೂಟರ್ ನೀಡಿದ್ದಾರೆ ಇವೆಲ್ಲವೂ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.