
ತುಮಕೂರು: ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ಗ್ರಾಚ್ಯುಟಿಗೆ ಪಾವತಿಗೆ ಆಗ್ರಹಿಸಿ ಸಿಐಟಿಯು– ಅಂಗನವಾಡಿ ನೌಕರರ ಸಂಘದ ನೇತೃತ್ವದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಯಿತು.
‘ಅಂಗನವಾಡಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಎಲ್ಲ ಕಾರ್ಯಕರ್ತೆಯರು, ಸಹಾಯಕಿಯರಿಗೆ ಉಪಧನ ಪಾವತಿ ಕಾಯ್ದೆ–1972 ನಿಬಂಧನೆಗಳು ಅನ್ವಯವಾಗುತ್ತವೆ’ ಎಂದು ಸುಪ್ರೀಂ ಕೋರ್ಟ್ 2022 ಏಪ್ರಿಲ್ನಲ್ಲಿ ತೀರ್ಪು ನೀಡಿದೆ. ಹಾಗಾಗಿ 2011ರಿಂದ ನಿವೃತ್ತರಾದವರಿಗೆ ಗ್ರಾಚ್ಯುಟಿಗೆ ನೀಡಬೇಕು ಎಂದು ಒತ್ತಾಯಿಸಿದರು.
ಸುಪ್ರೀಂ ಕೋರ್ಟ್ ತೀರ್ಪು ಜಾರಿಗಾಗಿ ನಡೆದ ಹೋರಾಟಕ್ಕೆ ಮಣಿದ ರಾಜ್ಯ ಸರ್ಕಾರ ಕೆಲವು ಸೌಲಭ್ಯ ನೀಡಿದೆ. 1–4–2023ರ ನಂತರ ನಿವೃತ್ತರಾದವರಿಗೆ ಮಾತ್ರ ಗ್ರಾಚ್ಯುಟಿ ನೀಡುವುದನ್ನು ಜಾರಿ ಮಾಡಿದೆ. ಈ ಆದೇಶ 2011ರಿಂದ 2023 ಮಾರ್ಚ್ ಅವಧಿಯಲ್ಲಿ ನಿವೃತ್ತರಾದ 10,311 ಕಾರ್ಯಕರ್ತೆಯರು, 11,980 ಸಹಾಯಕಿಯರಿಗೂ ಅನ್ವಯಿಸಬೇಕು. ಇದಕ್ಕಾಗಿ ₹183 ಕೋಟಿ ಅನುದಾನ ನೀಡಬೇಕು ಎಂದು ಮನವಿ ಮಾಡಿದರು.
ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಸೈಯದ್ ಮುಜೀಬ್, ಅಂಗನವಾಡಿ ನೌಕರರ ಸಂಘದ ನಗರ ಘಟಕದ ಅಧ್ಯಕ್ಷೆ ಬಿ.ಕೆ.ಗೌರಮ್ಮ, ಪ್ರಧಾನ ಕಾರ್ಯದರ್ಶಿ ಜಬೀನಾ ಖಾತೊನ್, ಗ್ರಾಮಾಂತರ ಘಟಕದ ಅಧ್ಯಕ್ಷೆ ಗಂಗಮ್ಮ, ಪ್ರಧಾನ ಕಾರ್ಯದರ್ಶಿ ಪ್ರೇಮಾ, ಪ್ರಮುಖರಾದ ವಿನೋದ, ರಾಜಮ್ಮ, ಜಯಂತಿ, ರಾಮಕ್ಕ ಪಾಲ್ಗೊಂಡಿದ್ದರು.
ಇಲಾಖೆ ಅಧಿಕಾರಿ ರಾಘವೇಂದ್ರ ಮನವಿ ಸ್ವಿಕರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.