ಗುಬ್ಬಿ: ಭಯೋತ್ಪಾದನೆ ಪ್ರಪಂಚಕ್ಕೆ ಮಾರಕ. ಇದರ ಬಗ್ಗೆ ಜಾಗೃತಿ ಅಗತ್ಯವಿದೆ ಎಂದು ತಹಶೀಲ್ದಾರ್ ಆರತಿ ಬಿ. ತಿಳಿಸಿದರು.
ತಾಲ್ಲೂಕು ಆಡಳಿತ ಸೌಧದಲ್ಲಿ ಬುಧವಾರ ಏರ್ಪಡಿಸಿದ್ದ ಭಯೋತ್ಪಾದನಾ ವಿರೋಧಿ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಎಲ್ಟಿಟಿಇ ದಾಳಿಗೆ ತುತ್ತಾಗಿ ಹತ್ಯೆಯಾದ ಮೇ 21ನ್ನು ಭಯೋತ್ಪಾದನಾ ವಿರೋಧಿ ದಿನವನ್ನಾಗಿ ಆಚರಿಸಲಾಗುತ್ತಿದೆ. ಬದುಕುವ ಹಕ್ಕು ಎಲ್ಲರಿಗೂ ಇದ್ದು, ಅದನ್ನು ಬಲವಂತವಾಗಿ ಅಂತ್ಯಗೊಳಿಸುವುದು ಕಾನೂನು ಬಾಹಿರ ಎಂದು ಹೇಳಿದರು.
ಭಯೋತ್ಪಾದನಾ ಚಟುವಟಿಕೆಯಲ್ಲಿ ತೊಡಗಿರುವವರು ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತ ಮನುಕುಲಕ್ಕೆ ಮಾರಕವಾಗಿದ್ದಾರೆ. ಅಂತಹ ಭಯೋತ್ಪಾದನಾ ಕೃತ್ಯಗಳನ್ನು ಎಲ್ಲರೂ ಖಂಡಿಸಬೇಕು ಎಂದರು.
ಭಯೋತ್ಪಾದನೆ ಮಟ್ಟಹಾಕಲು ಎಲ್ಲರ ಸಹಕಾರ ಅಗತ್ಯ. ಸ್ವಾರ್ಥ ಬಿಟ್ಟು ರಾಜ್ಯ ಹಾಗೂ ದೇಶದ ಹಿತ ದೃಷ್ಟಿಯಿಂದ ಭಯೋತ್ಪಾದನೆ ವಿರುದ್ಧ ಎಚ್ಚೆತ್ತುಕೊಳ್ಳಬೇಕಿದೆ ಎಂದು ತಿಳಿಸಿದರು.
ಭಯೋತ್ಪಾದನಾ ಕೃತ್ಯಗಳ ವಿರುದ್ಧ ಜಾಗೃತರಾಗದಿದ್ದಲ್ಲಿ ಸಮಾಜಘಾತಕ ಶಕ್ತಿಗಳು ಹಾಗೂ ಭಯೋತ್ಪಾದಕರು ಅಮಾನುಷ ಕೃತ್ಯಗಳನ್ನು ಮುಂದುವರೆಸುವರು. ಇದರಿಂದ ಅಮಾಯಕರು ಜೀವ ಕಳೆದುಕೊಳ್ಳುವ ಜೊತೆಗೆ ದೇಶದ ಅಭಿವೃದ್ಧಿ ಕುಂಟಿತಗೊಳ್ಳುವುದು ಎಂದರು.
ಕಾರ್ಯಕ್ರಮದಲ್ಲಿ ಪ್ರತಿಜ್ಞಾವಿಧಿ ಬೋಧಿಸಲಾಯಿತು.
ಶಿರಸ್ತೇದಾರ್ ವರುಣ್, ಖಾನ್, ತಾಲ್ಲೂಕು ಕಚೇರಿಯ ಸಿಬ್ಬಂದಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.