ತುಮಕೂರು:ಎ.ಆರ್.ಕೃಷ್ಣಶಾಸ್ತ್ರಿ ಅವರು ಕನ್ನಡ ಗದ್ಯ ಶೈಲಿ ರೂಪಿಸಿಕೊಟ್ಟ ಪ್ರಮುಖರು. ಅವರು ಸಮರ್ಥ ಶಿಷ್ಯರನ್ನು ಕನ್ನಡ ಸಾಹಿತ್ಯ ಸೇವೆಗೆ ಅಣಿ ಮಾಡಿದರು ಎಂದು ತುಮಕೂರು ವಿಶ್ವವಿದ್ಯಾನಿಲಯ ಸಹಾಯಕ ಪ್ರಾಧ್ಯಾಪಕ ವೆಂಕಟರೆಡ್ಡಿ ರಾಮರೆಡ್ಡಿ ತಿಳಿಸಿದರು.
ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನಲ್ಲಿ ನಡೆದ ‘ಎ.ಆರ್.ಕೃಷ್ಣಶಾಸ್ತ್ರಿ ಬದುಕು-ಬರಹ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪತ್ರಿಕಾ ಸಂಪಾದಕರಾಗಿ, ಲೇಖಕರಾಗಿ, ವಾಗ್ಮಿಯಾಗಿ, ಸಾಹಿತ್ಯ ಪ್ರಸಾರಕರಾಗಿ, ಸಂಘಟಕರಾಗಿ ಬಹುಮುಖಿ ವ್ಯಕ್ತಿತ್ವ ಹೊಂದಿದ್ದವರು ಕೃಷ್ಣಶಾಸ್ತ್ರಿಗಳು ಎಂದರು.
ಜಾನಪದ ವಿದ್ವಾಂಸ ಎಚ್.ವಿ.ವೀರಭದ್ರಯ್ಯ, ತೀ.ನಂ.ಶ್ರೀ, ಬಿ.ಎಂ.ಶ್ರೀ, ಕಾರಂತ, ಕಂಬಾರ ಅವರ ಕೃತಿಗಳನ್ನು ಓದಿ ಅರ್ಥ ಮಾಡಿಕೊಳ್ಳಬೇಕಿದೆ. ಅವರು ಸಾಹಿತ್ಯವನ್ನು ಯುವಕರು ಅಧ್ಯಯನ ಮಾಡುವ ಮೂಲಕ ಅವರಿಗೆ ಗೌರವ ನೀಡಬೇಕಿದೆ ಎಂದು ಹೇಳಿದರು.
ಸಂಶೋಧಕ ಎಸ್.ಪಿ.ಪದ್ಮಪ್ರಸಾದ್, ಡಾ.ರಾಜಶೇಖರ್ ಹಾಗೂ ಲೇಖಕ ಎನ್.ನಾಗಪ್ಪ ಮಾತನಾಡಿದರು.
ಇತಿಹಾಸ ಸಂಶೋಧಕ ಷ.ಶೆಟ್ಟರ್ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಸುಧಾಕರ ಚತುರ್ವೇದಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ನಿವೃತ್ತ ಉಪನ್ಯಾಸಕರಾದ ಪ್ರೇಮಾ ಕುಮಾರಸ್ವಾಮಿ, ಪ್ರವಚನಕಾರ ಮುರಳಿ ಕೃಷ್ಣಪ್ಪ, ಹೊನ್ನಗಾನಹಳ್ಳಿ ಕರಿಯಣ್ಣ, ಶಿವಣ್ಣ ಬೆಳವಾಡಿ,
ರೇಣುಕಾ, ವರದರಾಜು ಡಿ.ಎಸ್.ಅಕ್ಷತಾ, ಸಿದ್ಧಣ್ಣ, ಮಿಮಿಕ್ರಿ ಈಶ್ವರಯ್ಯ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.