ತುಮಕೂರು: ನಗರದ ಎಸ್.ಎಸ್.ಪುರಂನಲ್ಲಿ ಮಯೂರ ಯುವ ವೇದಿಕೆ ವತಿಯಿಂದ ಸಂಗ್ರಹಿಸಿದ ಆಹಾರ ಸಾಮಗ್ರಿ, ದಿನಬಳಕೆ ವಸ್ತುಗಳನ್ನು ನೆರೆ ಹಾವಳಿಯಿಂದ ತತ್ತರಿಸಿರುವ ಉತ್ತರ ಕರ್ನಾಟಕ ಭಾಗದ ಹಳ್ಳಿಗಳಿಗೆ ಶುಕ್ರವಾರ ಕಳುಹಿಸಿ ಕೊಡಲಾಯಿತು.
ನೊಂದವರಿಗೆ ಆಹಾರ ಸಾಮಗ್ರಿ ಕಳುಹಿಸಿಕೊಡುವ ಮೂಲಕ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಯಿತು. ವೇದಿಕೆ ವತಿಯಿಂದ ಪ್ರತಿ ವರ್ಷವೂ ವಿವಿಧ ಸಾಂಸ್ಕೃತಿಕ, ಹಿರಿಯ ನಾಗರಿಕರಿಗೆ ಸನ್ಮಾನ ಮತ್ತಿತರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ರಾಜ್ಯೋತ್ಸವ ಆಚರಿಸಲಾಗುತಿತ್ತು. ಆದರೆ ಈ ಬಾರಿ ಕೋವಿಡ್ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ನೆರೆಯಿಂದ ಜನರು ತತ್ತರಿಸಿದ್ದು, ರಾಜ್ಯೋತ್ಸವವನ್ನು ಸರಳವಾಗಿ ಆಚರಿಸಿ ಸಂತ್ರಸ್ತರಿಗೆ ನೆರವು ನೀಡಲಾಯಿತು.
ಆಹಾರ ಪದಾರ್ಥ ಕೊಂಡೊಯ್ಯುವ ವಾಹನಕ್ಕೆ ಶಾಸಕ ಜ್ಯೋತಿ ಗಣೇಶ್ ಚಾಲನೆ ನೀಡಿದರು. ಬಾಗಲಕೋಟೆ ಜಿಲ್ಲೆ ಬಾದಾಮಿ ನೆರೆ ಸಂತ್ರಸ್ತರಿಗೆ 100 ಚೀಲ ಅಕ್ಕಿ, ಸೀರೆಗಳು ಸೇರಿದಂತೆ ಅಗತ್ಯ ಸಾಮಗ್ರಿಗಳನ್ನು ಕೊಂಡೊಯ್ಯಲಾಗುತ್ತಿದೆ ಎಂದು ವೇದಿಕೆ ಅಧ್ಯಕ್ಷ ನಾಗರಾಜರಾವ್ ತಿಳಿಸಿದರು.
ವೇದಿಕೆ ಗೌರವಾಧ್ಯಕ್ಷ ಸತ್ಯನಾರಾಯಣ್, ಮುಖಂಡರಾದ ಹೆಬ್ಬೂರು ಶ್ರೀನಿವಾಸಮೂರ್ತಿ, ಸುಧಾಕರ್, ಸ್ವಾಮಿ, ಚಂಗಾವಿ ರವಿ, ಉದಯಗೌಡ, ಶ್ರೀನಿವಾಸಶೆಟ್ಟಿ, ನಾರಾಯಣಗೌಡ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.