ಕುಣಿಗಲ್: ಸಾಮಾಜಿಕ ಜಾಲತಾಣ ದಲ್ಲಿ ವಕೀಲರ ಬಗ್ಗೆ ಅವಹೇಳನ ಬರಹ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡನ ಬಗ್ಗೆ ಕ್ರಮಕ್ಕೆ ಆಗ್ರಹಿಸಿದ ವಕೀಲರು ಬುಧವಾರವೂ ಕಲಾಪದಿಂದ ಹೊರ ಗುಳಿದಿರುವುದಾಗಿ ವಕೀಲರ ಸಂಘದ ಅಧ್ಯಕ್ಷ ದಯಾನಂದ್ ತಿಳಿಸಿದ್ದಾರೆ.
ಇದೇ 19ರಂದು ಕಾಂಗ್ರೆಸ್ ಮುಖಂಡ ಹಾಲುವಾಗಿಲು ಸ್ವಾಮಿ, ತಮ್ಮ ಫೇಸ್ಬುಕ್ ಖಾತೆಯಲ್ಲಿ ವಕೀಲರ ಕುರಿತು ಅವಹೇಳನ ಬರಹ ಪ್ರಕಟಿಸಿದ್ದರು. ಇದರಿಂದ ಆವೇಶಗೊಂಡ ವಕೀಲರ ವೃಂದದವರ ಮನವಿ ಮೇರೆಗೆ ವಕೀಲರ ಸಂಘದ ಅಧ್ಯಕ್ಷ ದಯಾನಂದ್ ಅಧ್ಯಕ್ಷತೆಯಲ್ಲಿ ಭಾನುವಾರ ತುರ್ತು ಸಭೆ ನಡೆಸಿ, ಹಾಲುವಾಗಿಲು ಸ್ವಾಮಿ ವಿರುದ್ಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.
ಪೊಲೀಸರು, ವಕೀಲರ ದೂರಿಗೆ ಸಂಬಂಧಿಸಿದಂತೆ ಎನ್.ಸಿ. ನೀಡಿ, ಕಾಂಗ್ರೆಸ್ ಮುಖಂಡ ಹಾಲುವಾಗಿಲು ಸ್ವಾಮಿ ಅವರಿಂದ ಹೇಳಿಕೆ ಪಡೆದಿದ್ದರು.
ಸೋಮವಾರ ಬೆಳಿಗ್ಗೆ ಕಲಾಪ ಪ್ರಾರಂಭವಾಗುವ ಮುನ್ನಾ ಸಭೆ ನಡೆಸಿದ ವಕೀಲರು, ಹಾಲುವಾಗಿಲು ಸ್ವಾಮಿ ವಿರುದ್ಧ ದೂರು ನೀಡಿದ್ದರೂ ಕಾನೂನು ಕ್ರಮ ತೆಗೆದುಕೊಳ್ಳುವಲ್ಲಿ ಪೊಲೀಸ್ ಠಾಣಾಧಿಕಾರಿಗಳು ಕರ್ತವ್ಯ ಲೋಪ ಎಸಗಿದ್ದಾರೆ. ಕ್ರಮ ತೆಗೆದಕೊಳ್ಳುವವರೆಗೂ ನ್ಯಾಯಾಲಯದ ಕಲಾಪಗಳಿಂದ ಹೊರಗುಳಿಯುವ ಸರ್ವಾನುಮತದ ತೀರ್ಮಾನ ಕೈಗೊಂಡರು.
ಸಿಪಿಐ ಅಶೋಕ್ ಕುಮಾರ್ ಪ್ರತಿಕ್ರಿಯಿಸಿ, ವಕೀಲರ ಸಂಘದವರ ದೂರಿಗೆ ಸ್ಪಂದಿಸಿ ಕಾನೂನಿನ ಪ್ರಕಾರ ಎನ್.ಸಿ. ನೀಡಿದ್ದೇವೆ, ಹೇಳಿಕೆ ಪಡೆದಿದ್ದೇವೆ. ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.