ಕುಣಿಗಲ್: ಆಧುನಿಕ ಯುಗದಲ್ಲಿ ಬಂಜಾರರು ಭಾಷೆ, ಸಂಸ್ಕೃತಿ, ಆಚರಣೆ, ಸಾಮಾಜಿಕ ಮೌಲ್ಯ ಮರೆಯುತ್ತಿದ್ದೇವೆ ಎಂದು ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಅಧ್ಯಕ್ಷ ಎ.ಆರ್.ಗೋವಿಂದಸ್ವಾಮಿ ವಿಷಾದಿಸಿದರು.
ತಾಲ್ಲೂಕಿನ ನಾಗನಹಳ್ಳಿ ತಾಂಡಾದಲ್ಲಿ ಸೋಮವಾರ ಕರ್ನಾಟಕ ಬಂಜಾರ (ಲಂಬಾಣಿ) ಹಕ್ಕು ಸಂರಕ್ಷಣಾ ಸಮಿತಿ ತಾಲ್ಲೂಕು ಘಟಕಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಮುದಾಯದ ಜನ ಅನೇಕ ದುಶ್ಚಟಗಳಿಗೆ ದಾಸರಾಗಿ, ಕೃಷಿಯಿಂದ ವಿಮುಕ್ತರಾಗುತ್ತಿದ್ದಾರೆ. ನಗರಕ್ಕೆ ವಲಸೆ ಹೋಗಿ ಕೂಲಿ ಮಾಡುವ ಮಟ್ಟದಲ್ಲಿದ್ದು, ಮಕ್ಕಳಿಗೆ ಶಿಕ್ಷಣವನ್ನೂ ವಂಚಿಸಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ಬಂಜಾರ ಅಕಾಡೆಮಿಯಿಂದ ತಾಂಡಾ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. 3,500 ತಾಂಡಾಗಳಲ್ಲಿ ಜಾಗೃತ ಕಾರ್ಯಕ್ರಮ ನಡೆಸಲಾಗುವುದು. ಬಂಜಾರರು ಸಂಘಟಿತರಾಗಬೇಕಾದ ಅಗತ್ಯವಿದೆ ಎಂದರು.
ರಾಜ್ಯದ ಪ್ರತಿ ತಾಂಡಾಗಳಲ್ಲೂ ವೇದಿಕೆ ಆರಂಭಿಸಲಾಗುವುದು. ಸಮುದಾಯವನ್ನು ಎಲ್ಲ ರೀತಿಯಲ್ಲಿ ಸಂಘಟಿಸುವ ಉದ್ದೇಶವಿದೆ ಎಂದು ತಿಳಿಸಿದರು.
ಮುಖಂಡ ಎಸ್.ಆರ್.ರಾಜಾನಾಯಕ್, ‘ಬಂಜಾರರು ತಾಂಡಾ ಮಟ್ಟದಲ್ಲಿ ಸಂಘಟಿತರಾಗಬೇಕು. ಇದರಿಂದ ಸಮುದಾಯದ ಪ್ರಗತಿ ಸಾಧ್ಯವಾಗಲಿದೆ’ ಎಂದು ಹೇಳಿದರು.
ಮುಖಂಡರಾದ ಧರ್ಮರಾಜ್, ಸತೀಶ್ ನಾಯಕ್, ಮೂರ್ತಿನಾಯಕ್, ಎಸ್.ಲೋಕೇಶ್, ರಮೇಶ್ ನಾಯಕ್, ನಾಗೇಶ್ ಇತರರು ಹಾಜರಿದ್ದರು.