ಕುಣಿಗಲ್: ನಾಗರಿಕರ ದೂರಿನ ಮೇರೆಗೆ ತಾಲ್ಲೂಕಿನ ಕೊತ್ತಗೆರೆ ಹೋಬಳಿಯ ದೊಡ್ಡಮಳಲವಾಡಿ ಗ್ರಾಮದಲ್ಲಿ ನಡೆಯುತ್ತಿದ್ದ ಬಾಲ್ಯವಿವಾಹ ತಡೆಯುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದು, ಪೋಷಕರಿಗೆ ಕಾನೂನಿನ ಅರಿವು ಮೂಡಿಸಿದರು.
ದೊಡ್ಡಮಳಲವಾಡಿ ಗ್ರಾಮದ ವರನೊಂದಿಗೆ ಗಿಡದಪಾಳ್ಯದ ವಧುವಿನ ವಿವಾಹದ ಪ್ರಥಮ ಶಾಸ್ತ್ರ ಭಾನುವಾರ ಮತ್ತು ಸೋಮವಾರ ಬೆಳಿಗ್ಗೆ ಮುಹೂರ್ತ ನಿಗದಿಯಾಗಿತ್ತು.
ಭಾನುವಾರ ಸಂಜೆ ವಿವಾಹದ ಕಾರ್ಯ ನಡೆಯುತ್ತಿರುವ ಸಮಯದಲ್ಲಿ ಸಾರ್ವಜನಿಕರ ದೂರಿನ ಮೇರೆಗೆ ಸ್ಥಳಕ್ಕೆ ಆಗಮಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಲಕ್ಷ್ಮಿಬಾಯಿ, ಅಂಗನವಾಡಿ ಕಾರ್ಯಕರ್ತೆ ಚಿಕ್ಕತಾಯಮ್ಮ, ಆಶಾ ಕಾರ್ಯಕರ್ತೆ ರೇಖಾ ದಾಖಲೆ ಪರಿಶೀಲಿಸಿದರು.
ವಧುವಿನ ವಯಸ್ಸು 17 ವರ್ಷ ಒಂದು ತಿಂಗಳಾಗಿದೆ. 18 ವರ್ಷ ಪೂರ್ಣಗೊಳ್ಳದ ಹೊರತು ವಿವಾಹ ಮಾಡುವಂತಿಲ್ಲ ಎಂದು ಮನವರಿಕೆ ಮಾಡಿಕೊಟ್ಟರು. ಬಾಲ್ಯವಿವಾಹ ತಡೆ ಕಾಯ್ದೆ ಬಗ್ಗೆ ಅರಿವು ಮೂಡಿಸಿ ಪೋಷಕರಿಂದ ಮುಚ್ಚಳಿಕೆ ಬರೆಸಿಕೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.