ADVERTISEMENT

ಪ್ರಾಥಮಿಕ ಚಿಕಿತ್ಸೆ; ಆಯುರ್ವೇದ ಪದ್ಧತಿ ಉತ್ತಮ

ಧನ್ವಂತರಿ ಜಯಂತಿ ಹಾಗೂ 4ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯಲ್ಲಿ ಶಾಸಕ ಜ್ಯೋತಿ ಗಣೇಶ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2019, 12:59 IST
Last Updated 25 ಅಕ್ಟೋಬರ್ 2019, 12:59 IST
ಕಾರ್ಯಕ್ರಮವನ್ನು ಶಾಸಕ ಜ್ಯೋತಿ ಗಣೇಶ್ ಉದ್ಘಾಟಿಸಿದರು. ಡಾ.ವೀರಭದ್ರಯ್ಯ ಹಾಗೂ ಆಯುಷ್ ಇಲಾಖೆ ಅಧಿಕಾರಿಗಳು ಇದ್ದರು.
ಕಾರ್ಯಕ್ರಮವನ್ನು ಶಾಸಕ ಜ್ಯೋತಿ ಗಣೇಶ್ ಉದ್ಘಾಟಿಸಿದರು. ಡಾ.ವೀರಭದ್ರಯ್ಯ ಹಾಗೂ ಆಯುಷ್ ಇಲಾಖೆ ಅಧಿಕಾರಿಗಳು ಇದ್ದರು.   

ತುಮಕೂರು: ಪುರಾತನ ಕಾಲದಿಂದಲೂ ಹಿಂದೂ ಪುರಾಣದಲ್ಲಿ ಅನುಸರಿಸುವ ಆಯುರ್ವೇದ ಚಿಕಿತ್ಸಾ ಪದ್ಧತಿಯು ಪ್ರಾಥಮಿಕ ಚಿಕಿತ್ಸೆಗೆ ಉತ್ತಮವಾಗಿದೆ ಎಂದು ಶಾಸಕ ಜಿ.ಬಿ.ಜ್ಯೋತಿ ಗಣೇಶ್ ತಿಳಿಸಿದರು.

ರಾಷ್ಟ್ರೀಯ ಆಯುಷ್ ಅಭಿಯಾನದಡಿ ಜಿಲ್ಲಾ ಆಸ್ಪತ್ರೆ ಸಭಾಂಗಣದದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಧನ್ವಂತರಿ ಜಯಂತಿ ಹಾಗೂ 4ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದಾಗ ಯೋಗ ಮತ್ತು ಆಯುರ್ವೇದ ದಿನವನ್ನು ರಾಷ್ಟ್ರೀಯ ಮಟ್ಟದಲ್ಲಿ ಆಚರಣೆಗೆ ತರಬೇಕು ಎನ್ನುವ ಆಶಯದೊಂದಿಗೆ ಹೊಂದಿದ್ದರು. ಯೋಗವನ್ನು ವಿಶ್ವಕ್ಕೆ ಪರಿಚಯಿಸಿದರು ಎಂದರು.

ADVERTISEMENT

‘ಅಲೋಪತಿ ಚಿಕಿತ್ಸಾ ಪದ್ಧತಿಯಿಂದ ಆಗುವ ಅಡ್ಡಪರಿಣಾಮಗಳ ಬಗ್ಗೆ ಜನರು ಅರಿತಿದ್ದರು. ನಮ್ಮ ಪೂರ್ವಜರು ಅನುಸರಿಸಿಕೊಂಡು ಬಂದಿರುವ ಆಯುರ್ವೇದ ಪದ್ಧತಿಯನ್ನು ಅನುಸರಿಸಿ ಆರೋಗ್ಯ ಕಾಪಾಡಿಕೊಳ್ಳಬೇಕು’ ಎಂದರು.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ವೀರಭದ್ರಯ್ಯ, ಆಯುರ್ವೇದ ಚಿಕಿತ್ಸಾ ಪದ್ಧತಿಯನ್ನು ಭಾರತದಲ್ಲಿ ಅನಾದಿ ಕಾಲದಿಂದಲೂ ಅನುಸರಿಸುತ್ತಿದ್ದೇವೆ. ಬೇರೆ ದೇಶಗಳಲ್ಲಿಯೂ ಈ ಪದ್ಧತಿ ಅನುಸರಿಸಲಾಗುತ್ತಿದೆ. ವಿಪರ್ಯಾಸವೆಂದರೆ ನಮ್ಮ ದೇಶದಲ್ಲಿ ಇತ್ತೀಚೆಗೆ ಇದರ ಬಗ್ಗೆ ಸಾರ್ವಜನಿಕರಿಗೆ ಪ್ರಚುರಪಡಿಸುವಲ್ಲಿ ವಿಫಲರಾಗುತ್ತಿದ್ದೇವೆ. ಆಯುರ್ವೇದ ಅಭ್ಯಾಸ ಮಾಡುವವರು ಈ ಬಗ್ಗೆ ಅರಿವು ಮೂಡಿಸಿ ಉಳಿಸಿ ಬೆಳೆಸುವುದು ಅಗತ್ಯವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಆಯುರ್ವೇದ ಜೀವನಶೈಲಿ ಕುರಿತ ಉಪನ್ಯಾಸ ನೀಡಲಾಯಿತು. ಇದೇ ಸಂದರ್ಭದಲ್ಲಿ ಮನೆಮದ್ದುಗಳಲ್ಲಿ ಬಳಸುವ ವಿವಿಧ ಪದಾರ್ಥಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.

ಅಂತರರಾಷ್ಟ್ರೀಯ ಯೋಗಪಟು ನಾಗರಾಜ ರಾವ್, ಡಾ.ವೆಂಕಟೇಶ್‌ಮಯ್ಯ, ಸಂಯೋಜನಾಧಿಕಾರಿ ಡಾ.ಪ್ರಭಾಕರ್, ಸಹಾಯಕ ಆಡಳಿತಾಧಿಕಾರಿ ಅಸ್ಲಾಂ ಬಾಷಾ, ಡಾ.ಗುರುಪ್ರಸಾದ್, ಡಾ.ಅತೀಕ್ ಅಹ್ಮದ್, ಡಾ.ಪ್ರಸನ್ನ, ಸರ್ಕಾರಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಜಯಲಕ್ಷ್ಮಿ, ಆಯುಷ್ ಇಲಾಖೆಯ ವೈದ್ಯಾಧಿಕಾರಿಗಳು, ಕಚೇರಿ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.