ತುಮಕೂರು: ಐದು ವರ್ಷಗಳಿಂದ ತನ್ನನ್ನು ಮದುವೆ ಆಗುವುದಾಗಿ ನಂಬಿಸಿದ ಹುಡುಗಿ, ಆಕೆಯ ಪೋಷಕರು ಮತ್ತು ಸಹೋದರ ತನ್ನಿಂದ ₹ 1.3 ಕೋಟಿ ಪಡೆದು ವಂಚಿಸಿದ್ದಾರೆ. ಮದುವೆಯನ್ನು ಮಾಡಿಕೊಟ್ಟಿಲ್ಲ ಎಂದು ಅಶೋಕ್ಕುಮಾರ್ ಎಂಬುವವರು ತುಮಕೂರು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣ ಹಿನ್ನೆಲೆ: ಮದುವೆ ಹುಡುಗಿಯನ್ನು ನೋಡಿದರೂ ಹೊಂದಾಣಿಕೆ ಆಗದೆ ವಿಳಂಬವಾಗುತ್ತಿತ್ತು. ಸ್ನೇಹಿತರ ಸಲಹೆ ಮೇರೆಗೆ ಕನ್ನಡ ಮ್ಯಾಟ್ರಿ ಮೋನಿಯಲ್ನಲ್ಲಿ ನನ್ನ ವೈಯಕ್ತಿಕ ವಿವರ ಹಾಕಿದ್ದೆ. ಅಲ್ಲಿ ಪರಿಚಯವಾದ ಶ್ರುತಿ ಅವರು ಮದುವೆ ಆಗುವುದಾಗಿ ಒಪ್ಪಿದ್ದರು. ಪೋಷಕರು ಮದುವೆ ಮಾಡಲು ಒಪ್ಪಿಗೆ ನೀಡಿದ್ದಾರೆ ಎಂದು ಹೇಳಿದ್ದರು.
ಬಳಿಕ ಅವರ ತಂದೆ ಸಿದ್ದೇಗೌಡ, ತಾಯಿ ರಾಧಾ, ಅಣ್ಣ ಸಂದೇಶ್ ಮದುವೆ ಮಾಡಿಕೊಡುವುದಾಗಿ ಹೇಳಿದ್ದರು. ಇದಾದ ಕೆಲ ದಿನಗಳ ಬಳಿಕ ಶ್ರುತಿ, ಅವರ ಸಹೋದರ ಮತ್ತು ಪೋಷಕರು ತಮ್ಮ ಬ್ಯಾಂಕ್ ಖಾತೆಗೆ ಹಣ ಪಡೆದಿದ್ದರು ಎಂದು ಹೇಳಿದ್ದಾರೆ.
ಸಂದೇಶ್ ಬೆಂಗಳೂರಿನ ಜೀವನ್ ಬೀಮಾ ನಗರದಲ್ಲಿರುವ ಐಸಿಐಸಿಐ ಬ್ಯಾಂಕ್ ಖಾತೆಗೆ, ಆರ್ಟ್ ಆಫ್ ಲಿವಿಂಗ್ ಶಾಖೆಯ ಶ್ರುತಿ ಅವರ ಬ್ಯಾಂಕ್ ಖಾತೆಗೆ, ಅದೇ ಬ್ಯಾಂಕಿನಲ್ಲಿ ಶ್ರುತಿ ಅವರ ತಾಯಿ ರಾಧಾ ಅವರ ಖಾತೆಗೆ, ಬೆಂಗಳೂರಿನ ಕೋಣನಕುಂಟೆ ಕೆನರಾ ಬ್ಯಾಂಕ್ ನಲ್ಲಿ ಖಾತೆ ಹೊಂದಿರುವ ಶ್ರುತಿ ಅವರ ತಂದೆ ಸಿದ್ದೇಗೌಡ ಅವರ ಖಾತೆಗೆ 2014ರಿಂದ 2016ರವರೆ ಒಟ್ಟು ₹ 1.3 ಕೋಟಿ ಜಮಾ ಮಾಡಿಸಿಕೊಂಡಿದ್ದರು ಎಂದು ದೂರಿದ್ದಾರೆ.
ಮನೆ ಕಟ್ಟಿಸುತ್ತಿದ್ದು, ಮನೆ ನಿರ್ಮಾಣ ಪೂರ್ಣವಾದ ಬಳಿಕ ಮದುವೆ ಮಾಡುವುದಾಗಿ ಶ್ರುತಿ ಪೋಷಕರು ಮತ್ತು ಸಹೋದರ ಹೇಳಿದ್ದರು. ಆದರೆ, ಮದುವೆಯನ್ನು ಮಾಡದೆ ತನ್ನಿಂದ ಪಡೆದ ₹ ₹1.3 ಕೋಟಿ ಹಣವನ್ನು ಕೊಡದೆ ಬೇರೆಯವರಿಗೆ ಶ್ರುತಿ ಅವರನ್ನು ಮದುವೆ ಮಾಡಿಕೊಟ್ಟು ವಂಚಿಸಿದ್ದಾರೆ. ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.