
ತುಮಕೂರಿನಲ್ಲಿ ಭಾನುವಾರ ಕಾಂಗ್ರೆಸ್ ಮುಖಂಡರು ಕಾಂಗ್ರೆಸ್ ನಾಯಕ ರಾಹುಲ್ಗಾಂಧಿ ಕೈಗೊಂಡಿರುವ ‘ಭಾರತ್ ಜೋಡೊ ನ್ಯಾಯ’ ಯಾತ್ರೆಗೆ ಶುಭ ಹಾರೈಸಿದರು. ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಚಂದ್ರಶೇಖರಗೌಡ, ಮುಖಂಡರಾದ ಎಸ್.ಶಫಿ ಅಹ್ಮದ್, ಪಂಚಾಕ್ಷರಯ್ಯ, ಅಸ್ಲಾಂ ಪಾಷ, ಶ್ರೀನಿವಾಸ್, ಇತರರು ಉಪಸ್ಥಿತರಿದ್ದರು
ತುಮಕೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಮ್ಮಿಕೊಂಡಿರುವ ‘ಭಾರತ್ ಜೋಡೊ ನ್ಯಾಯ’ ಯಾತ್ರೆಗೆ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಶುಭ ಹಾರೈಸಿದರು. ಪಕ್ಷದ ಕಚೇರಿಯಲ್ಲಿ ಭಾನುವಾರ ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು.
‘ಕಳೆದ 10 ವರ್ಷಗಳ ಬಿಜೆಪಿ ಆಡಳಿತದ ತೆರಿಗೆಯಿಂದ ನೊಂದು, ಬೆಂದಿರುವ ಬಡ ಜೀವಿಗಳಿಗೆ ನ್ಯಾಯ ಯಾತ್ರೆ ಆಸರೆಯಾಗಲಿದೆ. ಜಿಎಸ್ಟಿ ಇನ್ನಿತರ ಪರೋಕ್ಷ ತೆರಿಗೆಗಳ ಮೂಲಕ ಹಗಲು ದರೋಡೆ ನಡೆಸುತ್ತಿರುವವರಿಗೆ ಈ ಯಾತ್ರೆ ನಡುಕ ಹುಟ್ಟಿಸಿದೆ’ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಚಂದ್ರಶೇಖರಗೌಡ ಹೇಳಿದರು.
ಚುನಾವಣೆ ಬರುವವರೆಗೂ ಉಸಿರಾಡಲು ಪರದಾಡುತ್ತಿದ್ದ ಸಂಸದ ಅನಂತಕುಮಾರ್ ಹೆಗಡೆ ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಇದು ಅವರ ಪಕ್ಷದ ಸಿದ್ಧಾಂತವನ್ನು ತೋರಿಸುತ್ತದೆ. ಕಾಂಗ್ರೆಸ್ ಎಂದಿಗೂ ಇಷ್ಟು ಕೀಳು ಮಟ್ಟಕ್ಕೆ ಇಳಿಯುವುದಿಲ್ಲ. ಮುಂದೆ ಮಾತನಾಡುವಾಗ ಎಚ್ಚರಿಕೆ ವಹಿಸಲಿ ಎಂದು ಎಚ್ಚರಿಸಿದರು.
ಮಾಜಿ ಶಾಸಕ ಎಸ್.ಶಫಿ ಅಹ್ಮದ್, ‘ರಾಹುಲ್ಗಾಂಧಿ ಅವರು ಯಾವುದೇ ರಾಜಕೀಯ ಉದ್ದೇಶವಿಲ್ಲದೆ, ಈ ದೇಶದ ಜನರಿಗೆ ನ್ಯಾಯ ಯಾತ್ರೆಗೆ ಮುಂದಾಗಿದ್ದಾರೆ. ಕಳೆದ ಒಂದು ವರ್ಷದಿಂದ ಜಾತಿ ತಾರತಮ್ಯದ ಅಗ್ನಿಕುಂಡದಲ್ಲಿ ಬೇಯುತ್ತಿರುವ ಮಣಿಪುರದಿಂದ ಪಾದಯಾತ್ರೆ ಪ್ರಾರಂಭಿಸಿದ್ದಾರೆ’ ಎಂದು ತಿಳಿಸಿದರು.
ಮಹಾನಗರ ಪಾಲಿಕೆ ಸದಸ್ಯ ಮಹೇಶ್, ಮುಖಂಡರಾದ ಪಂಚಾಕ್ಷರಯ್ಯ, ಅಸ್ಲಾಂ ಪಾಷ, ಶ್ರೀನಿವಾಸ್, ಸಿಮೆಂಟ್ ಮಂಜ, ಶಿವಾಜಿ, ಅತೀಕ ಅಹ್ಮದ್, ನಾಗರಾಜು, ನರಸಿಂಹಯ್ಯ, ಬಿ.ಜಿ.ಲಿಂಗರಾಜು, ವಾಲೆಚಂದ್ರು, ಕೆಂಪಣ್ಣ, ಎಂ.ವಿ.ರಾಘವೇಂದ್ರಸ್ವಾಮಿ, ದಿನೇಶ್, ಷಣ್ಮುಖಪ್ಪ, ನಟರಾಜಶೆಟ್ಟಿ, ಶೆಟ್ಟಾಳಯ್ಯ, ಮರಿಚನ್ನಮ್ಮ, ಸುಜಾತಾ, ಆದಿಲ್ ಇತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.