ADVERTISEMENT

ಮೊಳಗಿತು ಮೋದಿ ಪರ ಘೋಷಣೆ; ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ಅಮಿತ್‌ ಶಾ, ರೋಡ್‌ ಶೋ

​ಪ್ರಜಾವಾಣಿ ವಾರ್ತೆ
Published 2 ಮೇ 2019, 11:05 IST
Last Updated 2 ಮೇ 2019, 11:05 IST
ರೋಡ್ ಶೋನಲ್ಲಿ ಪಾಲ್ಗೊಂಡಿದ್ದ ಬಿಜೆಪಿ ಕಾರ್ಯಕರ್ತರು
ರೋಡ್ ಶೋನಲ್ಲಿ ಪಾಲ್ಗೊಂಡಿದ್ದ ಬಿಜೆಪಿ ಕಾರ್ಯಕರ್ತರು   

ತುಮಕೂರು: ನಗರದಲ್ಲಿ ಮಂಗಳವಾರ ನಡೆದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ರೋಡ್ ಶೋನಲ್ಲಿ ಪಕ್ಷದ ಕಾರ್ಯಕರ್ತರು ಮೋದಿ ಪದ ಘೋಷಣೆಗಳನ್ನು ಮೊಳಗಿಸಿದರು.

ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ಸಭೆ ಮುಗಿಸಿ ಬಂದ ಶಾ ಅವರು ನೇರವಾಗಿ ಸಿದ್ಧಗಂಗಾ ಮಠಕ್ಕೆ ತೆರಳಿದರು. ಅಲ್ಲಿ ಶಿವಕುಮಾರ ಸ್ವಾಮೀಜಿ ಅವರ ಗದ್ದುಗೆ ಪೂಜೆ ಸಲ್ಲಿಸಿದರು.

ಟೌನ್‌ಹಾಲ್‌ಗೆ ಬಂದ ಅವರನ್ನು ಬಿಜೆಪಿ ಕಾರ್ಯಕರ್ತರು ಮೋದಿ ಮೋದಿ ಎಂದು ಘೋಷಣೆ ಕೂಗುತ್ತಾ ಅದ್ಧೂರಿಯಾಗಿ ಬರಮಾಡಿಕೊಂಡರು.

ADVERTISEMENT

ಟೌನ್‌ಹಾಲ್‌ ಬಳಿ ಹೂವು ತುಂಬಿದ ಚೀಲ ಇಟ್ಟುಕೊಂಡು ಕಾಯುತ್ತಿದ್ದ ಕಾರ್ಯಕರ್ತರು ಅಮಿತ್‌ ಶಾ ಬಂದ ಕೂಡಲೇ ಅವರ ಮೇಲೆ ಚೆಲ್ಲಿದರು. ಸ್ಕೈವಾಕ್‌ ಮೇಲಿಂದಲೂ ಹೂ ಸುರಿಮಳೆ ಸುರಿಸಿದರು.

ಅಮಿತ್ ಶಾ ವಾಹನ ಹತ್ತಿ ಕಾರ್ಯಕರ್ತರ ಕಡೆ ಕೈಬಿಸಿದ ಕೂಡಲೇ ಕಾರ್ಯಕರ್ತರು ಕುಣಿದ ಕುಪ್ಪಳಿಸಿದರು. ಶಾ ಜೊತೆಗೆ ತುಮಕೂರು ಲೋಕಸಭಾ ಚುನಾವಣಾ ಉಸ್ತುವಾರಿ ವಿ.ಸೋಮಣ್ಣ, ಬಿಜೆಪಿ ಅಭ್ಯರ್ಥಿ ಜಿ.ಎಸ್‌.ಬಸವರಾಜು, ಶಾಸಕರಾದ ಬಿ.ಸಿ.ನಾಗೇಶ್‌, ಮಸಾಲ ಜಯರಾಮ್, ಮಾಜಿ ಶಾಸಕ ಸುರೇಶ್‌ ಗೌಡ, ಸೊಗಡು ಶಿವಣ್ಣ, ಹುಲಿನಾಯ್ಕರ್‌, ಶಿವಪ್ರಸಾದ್‌ ಇದ್ದರು.

ರೋಡ್‌ ಶೋನಲ್ಲಿ ಮೋದಿ, ಅಮಿತ್‌ ಶಾ ಹಾಗೂ ಬಸವರಾಜು ಪರ ಕಾರ್ಯಕರ್ತರು ಘೋಷಣೆ ಕೂಗಿದರು. ರೋಡ್‌ ಶೋ ಉದ್ದಕ್ಕೂ ಹೂವಿನ ಚೀಲವಿಟ್ಟು ಆಯಾ ಬೀದಿಯಲ್ಲಿ ಕಾಯುತ್ತಿದ್ದ ಕಾರ್ಯಕರ್ತರು ಹೂ ಎರೆಚಿದರು.

ಬಿಜೆಪಿ ಬಾವುಟಗಳನ್ನು ಹಾರಿಸುವ ಮೂಲಕ ಕಾರ್ಯಕರ್ತರು ಸಂಭ್ರಮಿಸಿದರು. ಅಷ್ಟೇ ಅಲ್ಲದೆ ಮೋದಿ ಅವರ ಮುಖವಾಡ ಹಾಕಿಕೊಂಡು ‘ಮೋದಿ ಮತ್ತೊಮ್ಮೆ’ ಎಂದು ಕೂಗಿದರು.

ಬಿ.ಎಚ್‌.ರಸ್ತೆ ಮೂಲಕ ಹೊರಟ ರೋಡ್‌ ಶೋ ಎಂ.ಜಿ.ರಸ್ತೆ ಮೂಲಕ ಸಾಗುವಾಗ ರಸ್ತೆ ಮಧ್ಯೆಯಲ್ಲಿ ಅಮಿತಾ ಶಾ ಇದ್ದ ವಾಹನವನ್ನು ತಡೆದ ಕಾರ್ಯಕರ್ತರು ಬೃಹತ್‌ ಹೂವಿನ ಹಾರಹಾಕಿದರು. ಗುಂಚಿ ಸರ್ಕಲ್‌ಗೆ ರೋಡ್‌ ಶೋ ಕೊನೆಗೊಂಡಿತು. ಕೂಡಲೇ ಅಮಿತ್‌ ಶಾ ವಾಹನದಿಂದ ಕೆಳಗಿಳಿದು ತೆರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.