ತಿಪಟೂರು: ಹಿಂದೂ ವಿರೋಧಿ ನೀತಿ ಅನುಸರಿಸುತ್ತಿರುವ ರಾಜ್ಯ ಸರ್ಕಾರ ಹಾಗೂ ಲಕ್ಷಾಂತರ ಜನರ ಧಾರ್ಮಿಕ ಶ್ರದ್ಧಾ ಕೇಂದ್ರವಾಗಿರುವ ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ರೂಪಿಸಿ ಅಪಪ್ರಚಾರ ಮಾಡಿರುವ ಎಡಪಂಥೀಯ ಸಂಘಟನೆಯ ಕೃತ್ಯ ವಿರೋಧಿಸಿ ‘ಧರ್ಮಸ್ಥಳಕ್ಕಾಗಿ ಧರ್ಮಯುದ್ಧ’ ಪ್ರತಿಭಟನೆಯನ್ನು ಆಗಸ್ಟ್ 23ರಂದು ತಾಲ್ಲೂಕು ಬಿಜೆಪಿ ಘಟಕದಿಂದ ನಡೆಸಲಾಗುವುದು ಎಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಗಂಗರಾಜು ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶನಿವಾರ ಬೆಳಗ್ಗೆ ನಗರದ ಕೆಂಪಮ್ಮ ದೇವಾಸ್ಥಾನದಿಂದ ಸಾವಿರಾರು ಬಿಜೆಪಿ ಕಾರ್ಯಕರ್ತರು, ಹಿಂದೂ ಧಾರ್ಮಿಕ ಸಂಘ ಸಂಸ್ಥೆಯವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಸದಸ್ಯರನ್ನು ಒಳಗೊಂಡು ಜಾಥಾ ಪ್ರಾರಂಭಿಸಿ ನಗರದ ಸಿಂಗ್ರಿ ನಂಜಪ್ಪ ವೃತ್ತದಲ್ಲಿ ಬೃಹತ್ ಪತ್ರಿಭಟನೆ ನಡೆಸಲಾಗುವುದು ಎಂದರು.
ಸಿಂಗ್ರಿ ನಂಜಪ್ಪ ವೃತ್ತದಲ್ಲಿನ ಹೈಮಾಸ್ಟ್ ದೀಪ ತೆರವುಗೊಳಿಸಿ ಗಡಿಯಾರ ಅಳವಡಿಸಿರುವುದು ಖಂಡನೀಯ. ಗಡಿಯಾರ ಬದಲಾವಣೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ತಾಲ್ಲೂಕು ಬಿಜೆಪಿಯಿಂದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹರಿಸಮುದ್ರ ಗಂಗಾಧರ್, ನಗರಾಧ್ಯಕ್ಷ ಜಗದೀಶ್, ಮಂಡಲ ಅಧ್ಯಕ್ಷ ಸತೀಶ್, ದೀಶಾ ಸದಸ್ಯ ಆಯರಹಳ್ಳಿ ಶಂಕರಪ್ಪ, ಹಿಂದುಳಿದ ವರ್ಗದ ಜಿಲ್ಲಾ ಕಾರ್ಯದರ್ಶಿ ಗಿರೀಶ್ ಈಚನೂರು, ರೈತಮೋರ್ಜಾ ಜಿಲ್ಲಾ ಪ್ರದಾನ ಕಾರ್ಯದರ್ಶಿ ರವೀಂದ್ರ, ಬಿಸಲೇಹಳ್ಳಿ ಜಗದೀಶ್, ತಾಲ್ಲೂಕು ಕಾರ್ಯದರ್ಶಿ ಗುರಗದಹಳ್ಳಿ ಉಮಾಶಂಕರ್, ಶಶಿಕುಮಾರ್ ಸಿಂಗೇನಹಳ್ಳಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.