ADVERTISEMENT

ಚಿಕ್ಕನಾಯಕನಹಳ್ಳಿ: ಸಂಕಲ್ಪ ಯಾತ್ರೆ ಮೊಟಕು

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2023, 8:10 IST
Last Updated 19 ಮಾರ್ಚ್ 2023, 8:10 IST

ಚಿಕ್ಕನಾಯಕನಹಳ್ಳಿ: ಪಟ್ಟಣದ ಮೂಲಕ ಹಾದು ಹೋಗಬೇಕಿದ್ದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯು ಸಮಯದ ಅಭಾವದಿಂದ ಮೊಟಕಾಯಿತು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮತ್ತಿತರ ನಾಯಕರಿದ್ದ ಯಾತ್ರೆಯು ತಿಪಟೂರು ಮೂಲಕ ಸಾಗಿ ಮಧ್ಯಾಹ್ನ 2.30ರ ವೇಳೆಗೆ ಕೈಮರದ ಬಳಿ ಚಿಕ್ಕನಾಯಕನಹಳ್ಳಿ ತಾಲ್ಲೂಕಿಗೆ ಪ್ರವೇಶಿಸಿತು. ಅಲ್ಲಿಂದ ಅದೇ ಮಾರ್ಗದಲ್ಲಿ ಸಾಗಿ ಮತಿಘಟ್ಟ, ಹುಳಿಯಾರಿನಲ್ಲಿ ಸಭೆ ಮುಗಿಸಿಕೊಂಡು ಚಿಕ್ಕನಾಯಕನಹಳ್ಳಿಗೆ ಬರಬೇಕಿತ್ತು.

ಹುಳಿಯಾರಿನಲ್ಲಿ ಸಭೆ ಮುಗಿಯುವುದು ತಡವಾಯಿತು. ನಡ್ಡಾ ಅವರು ತಮ್ಮ ನಿಗದಿತ ಕಾರ್ಯಕ್ರಮಗಳಿಗೆ ತೆರಳಬೇಕಾಗಿದ್ದರಿಂದ ಚಿಕ್ಕನಾಯಕನಹಳ್ಳಿ ಕಾರ್ಯಕ್ರಮ ಮೊಟಕಾಗಿದೆ. ಮತ್ತೊಂದು ದಿನ ನಡೆಯಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ADVERTISEMENT

ಪಕ್ಷದ ನಾಯಕರ ಆಗಮನದ ನಿರೀಕ್ಷೆಯಲ್ಲಿ ಕಾರ್ಯಕರ್ತರು ನೆಹರೂ ವೃತ್ತದ್ದಲ್ಲಿ ಸಂಜೆ ಬಹುಹೊತ್ತಿನವರೆಗೆ ಕಾದು ನಿಂತಿದ್ದರು.

ಆಕರ್ಷಣೆಯಾಗಿದ್ದ ಹೆಲಿಕಾಪ್ಟರ್‌ಗಳು: ಚಿಕ್ಕನಾಯಕನಹಳ್ಳಿ ಕಾರ್ಯಕ್ರಮ ಮುಗಿಸಿಕೊಂಡು ನಾಯಕರನ್ನು ಕರೆದೊಯ್ಯಲು ಬಂದಿಳಿದಿದ್ದ ಎರಡು ಹೆಲಿಕಾಪ್ಟರ್‌ಗಳು ಹಲವು ಗಂಟೆಗಳ ಕಾಲ ತಾಲ್ಲೂಕು ಕ್ರೀಡಾಂಗಣದ ಹೆಲಿಪ್ಯಾಡ್‌ನಲ್ಲೇ ನಿಂತಿದ್ದವು. ಮಕ್ಕಳಾದಿಯಾಗಿ ಸಾರ್ವಜನಿಕರು ಕುತೂಹಲದಿಂದ ಸರ್ಕಾರಿ ಕಿರಿಯ ಕಾಲೇಜಿನ ರಸ್ತೆಯಲ್ಲಿ ಓಡಾಡುತ್ತ ಅವುಗಳನ್ನು ವೀಕ್ಷಿಸುತ್ತಿದ್ದುದು ಕಂಡು
ಬಂದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.