ತುಮಕೂರು: ಲಂಚ ಪಡೆದ ಪ್ರಕರಣವೊಂದರಲ್ಲಿ ಸಿಕ್ಕಿಬಿದ್ದಿದ್ದ ಕುಣಿಗಲ್ ಪುರಸಭೆ ಕಂದಾಯ ಅಧಿಕಾರಿ ವಿ.ರಮೇಶ್ ಎಂಬಾತನಿಗೆ 4 ವರ್ಷ ಶಿಕ್ಷೆ ಹಾಗೂ ₹5 ಸಾವಿರ ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.
ಪ್ರಕರಣದ ಹಿನ್ನೆಲೆ: ಕುಣಿಗಲ್ ನಗರ ನಿವಾಸಿ ಶಬ್ಬೀರ್ ಖಾನ್ ಎಂಬ ವ್ಯಕ್ತಿಯು ವಿಲ್ ಪ್ರಕಾರ ತನ್ನ ಹೆಂಡತಿ ಹೆಸರಿಗೆ ಭಾಗ ಬರಬೇಕಾಗಿದ್ದು, ಅದನ್ನು ಹೆಂಡತಿ ಹೆಸರಿಗೆ ಪಾವತಿ ಖಾತೆ ಮಾಡಿಕೊಂಡುವಂತೆ ಅರ್ಜಿ ಸಲ್ಲಿಸಿದ್ದರು. ಈ ಕೆಲಸಕ್ಕಾಗಿ ಆರೋಪಿ ರಮೇಶ್ ₹5 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಮುಂಗಡ ಹಣವಾಗಿ ₹500 ಪಡೆದಿದ್ದರು.
ಲಂಚ ಹಣ ನೀಡಲು ಇಷ್ಟವಿಲ್ಲದ ಶಬ್ಬೀರ್ ಖಾನ್ ಕಂದಾಯ ಅಧಿಕಾರಿ ರಮೇಶ್ ಅವರು ಸರ್ಕಾರಿ ಕೆಲಸ ಮಾಡಿಕೊಡಲು ಲಂಚ ಕೇಳಿರುವ ಬಗ್ಗೆ ಮೊಬೈಲ್ನಲ್ಲಿ ಧ್ವನಿ ದಾಖಲಿಸಿಕೊಂಡು 2014 ಜುಲೈ 7ರಂದು ಲೋಕಾಯುಕ್ತರಿಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡಿದ್ದ ಹಿಂದಿನ ಪೊಲೀಸ್ ನಿರೀಕ್ಷಕ ಎಂ.ಆರ್.ಗೌತಮ್ ತನಿಖೆ ಪೂರ್ಣಗೊಳಿಸಿ, ನ್ಯಾಯಾಲಯದಲ್ಲಿ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ 7ನೇ ಅಧಿಕ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಧೀಶ ಸುಧೀಂದ್ರನಾಥ್ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ವಿಶೇಷ ಸರ್ಕಾರಿ ಅಭಿಯೋಜಕ ಎನ್.ಬಸವರಾಜು ವಾದ ಮಾಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.