ತುಮಕೂರು: ‘ಮತದಾನ ಮಾಡಲು ಬಿಡದೆ ನನ್ನ ಮೇಲೆ ಹಲ್ಲೆ ಮಾಡಿ, ಜಾತಿ ನಿಂದನೆ ಎಸಗಲಾಗಿದೆ. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿ ಹೆಬ್ಬೂರು ಹೋಬಳಿಯ ಬಿಸಲಹಳ್ಳಿ ಗ್ರಾಮದ ಕೃಷ್ಣಮೂರ್ತಿ ಎಂಬುವವರು ಸಹಾಯಕ ಚುನಾವಣಾಧಿಕಾರಿಗೆ ದೂರು ನೀಡಿದ್ದಾರೆ.
‘ನಾನು ಬಿಸಲಹಳ್ಳಿ ಮತಕೇಂದ್ರದಲ್ಲಿ ಮತದಾನ ಮಾಡಲು ನಿಂತಿದ್ದೆ. ಇದೇ ಗ್ರಾಮದ ಚನ್ನಕೇಶವ, ಉಮೇಶ, ಲಕ್ಷ್ಮಣ, ರಾಘು, ಆದರ್ಶ, ಗುರುಸ್ವಾಮಿ, ಗ್ರಾಮ ಪಂಚಾಯಿತಿ ಸದಸ್ಯರಾದ ನರಸಿಂಹಮೂರ್ತಿ, ವೆಂಕಟೇಶ್ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ’.
‘ತುಮಕೂರು ಗ್ರಾಮಾಂತರದಲ್ಲಿ ಹೊಲೆಯರು ಮತ್ತು ಮಾದಿಗರು ಬಿಜೆಪಿಗೆ ಮಾತ್ರ ಮತಹಾಕಬೇಕು. ನೀನು ಸಹ ಅದೇ ರೀತಿಯಲ್ಲಿ ಮತಹಾಕಬೇಕು. ನನಗೆ ಹಣವನ್ನು ನೀಡಲು ಬಂದಿದ್ದರು. ಇದಕ್ಕೆ ನಿರಾಕರಿಸಿದಾಗ ಬೆದರಿಕೆ ಹಾಕಿದರು. ಕೃಷ್ಣಮೂರ್ತಿ ಎಂಬುವವರ ಕುಮ್ಮಕ್ಕಿನಿಂದ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದರು. ಈಗಾಗಲೇ ನನ್ನ ಕುಟುಂಬ ಮತ ಚಲಾಯಿಸಿರುವುದಿಲ್ಲ’.
‘ಈ ಸಂಬಂಧ ಹೆಬ್ಬೂರು ಪೊಲೀಸ್ ಠಾಣೆಗೆ ಈಗಾಗಲೇ ದೂರು ನೀಡಿದ್ದೇನೆ. ಅವರು ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ನನ್ನ ಕುಟುಂಬದವರಿಗೆ ಮತದಾನ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಕೋರುತ್ತೇನೆ’ ಎಂದು ಕೃಷ್ಣಮೂರ್ತಿ ದೂರಿನಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.