ADVERTISEMENT

ಬೈರನಾಯಕನಹಳ್ಳಿ ರೈತರ ಆಕ್ರೋಶ

ರಾಷ್ಟ್ರೀಯ ಹೆದ್ದಾರಿ 206 ವಿಸ್ತರಣೆ–ಅವೈಜ್ಞಾನಿಕ ಭೂ ಪರಿಹಾರ ಆರೋಪ; ಭೂಸ್ವಾಧೀನಾಧಿಕಾರಿ ಕಚೇರಿ ಎದುರು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2019, 15:54 IST
Last Updated 4 ಜನವರಿ 2019, 15:54 IST
ಭೂಸ್ವಾಧೀನಾಧಿಕಾರಿ ಕಚೇರಿ ಸಿಬ್ಬಂದಿ ಜೊತೆ ಮಾತಿನ ಚಕಮಕಿ ನಡೆಸಿದ ರೈತರು
ಭೂಸ್ವಾಧೀನಾಧಿಕಾರಿ ಕಚೇರಿ ಸಿಬ್ಬಂದಿ ಜೊತೆ ಮಾತಿನ ಚಕಮಕಿ ನಡೆಸಿದ ರೈತರು   

ತುಮಕೂರು: ರಾಷ್ಟ್ರೀಯ ಹೆದ್ದಾರಿ 206ರ ವಿಸ್ತರಣೆಗಾಗಿ ವಶಪಡಿಸಿಕೊಂಡಿರುವ ಭೂಮಿಗೆ ವೈಜ್ಞಾನಿಕ ಬೆಲೆ ನೀಡಿಲ್ಲ. ಕೂಡಲೇ ವೈಜ್ಞಾನಿಕ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ತಿಪಟೂರು ತಾಲ್ಲೂಕಿನ ಬೈರನಾಯಕಹಳ್ಳಿ ರೈತರು ನಗರದ ರಾಷ್ಟ್ರೀಯ ಹೆದ್ದಾರಿ 206ರ ಭೂಸ್ವಾಧೀನಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟಿಸಿದರು.

ಭೂಸ್ವಾಧೀನಾಧಿಕಾರಿ ಕಚೇರಿಯಲ್ಲಿ ಇಲ್ಲದ್ದರಿಂದ ಮತ್ತಷ್ಟು ಆಕ್ರೋಶ ವ್ಯಕ್ತಪಡಿಸಿದರು. ಅಧಿಕಾರಿಗಾಗಿ ಕಾದು ಕಾದು ಸುಸ್ತಾದರು.

‘ತಿಪಟೂರಿನಿಂದ ಕೇವಲ ಮೂರು ನಾಲ್ಕು ಕಿಲೋ ಮೀಟರ್ ದೂರದಲ್ಲಿ ಬೈರನಾಯಕನಹಳ್ಳಿ ಗ್ರಾಮದ ಜಮೀನುಗಳು ಬರುತ್ತವೆ. ಇಲ್ಲಿ ಗುಂಟೆಯೊಂದಕ್ಕೆ ₹ 33 ಸಾವಿರದಂತೆ ಈಗಾಗಲೇ ಮಾರಾಟವಾಗಿರುವ ನೋಂದಣಿ ಪತ್ರ ಇದೆ. ಪತ್ರವನ್ನು ಅಧಿಕಾರಿಗಳಿಗೆ ನೀಡಿದ್ದೇವೆ. ಆದರೆ ಗುಂಟೆಗೆ ₹ 5 ಸಾವಿರ ನಿಗದಿಗೊಳಿಸಿದ್ದಾರೆ. ಇದು ರೈತರಿಗೆ ಎಸಗುತ್ತಿರುವ ಮೋಸ’ ಎಂದು ದೂರಿದರು.

ADVERTISEMENT

‘ಈ ಹಿಂದಿನ ಭೂಸ್ವಾಧೀನಾಧಿಕಾರಿ ₹ 33 ಸಾವಿರ ಬೆಲೆ ನಿಗದಿಗೊಳಿಸುವುದಾಗಿ ಭರವಸೆ ನೀಡಿದ್ದರು. ಆದರೆ ಈಗ ಬೇರೆ ಬೇರೆ ಕಾರಣಗಳನ್ನು ನೀಡಿ ₹ 5 ಸಾವಿರ ನಿಗದಿಗೊಳಿಸಿದ್ದಾರೆ. ಈ ನಿರ್ಧಾರದಿಂದ ಸಾಮಾನ್ಯ ರೈತರಿಗೆ ಅನ್ಯಾಯವಾಗಿದೆ. ಕೆಲವು ಬಲಾಢ್ಯ ರೈತರು ಜಮೀನನ್ನು ನಿವೇಶನವನ್ನಾಗಿ ಪರಿವರ್ತಿಸಿದ್ದಾರೆ. ಅವರಿಗೆ ಒಳ್ಳೆಯ ಬೆಲೆ ಸಿಕ್ಕಿದೆ. ಆದರೆ ಸಾಮಾನ್ಯ ರೈತರಿಗೆ ನಷ್ಟವಾಗುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಂಸದ ಎಸ್‌.ಪಿ.ಮುದ್ದಹನುಮೇಗೌಡ ಹಾಗೂ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು ವೈಜ್ಞಾನಿಕವಾಗಿ ಪರಿಹಾರ ಕೊಡಿಸುವುದಾಗಿ ಹೇಳಿದ್ದರು. ಆದರೆ ಇನ್ನು ಆ ಭರವಸೆ ಹಾಗೆಯೇ ಇದೆ ಎಂದು ಬೇಸರದಿಂದ ನುಡಿದರು.

ಈಗಾಗಲೇ ಹಲವು ಬಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಭೂಸ್ವಾಧೀನಾಧಿಕಾರಿ ಕಚೇರಿಗೇ ಬರಲಿಲ್ಲ. ಹೋರಾಟವನ್ನು ಮುಂದುವರಿಸುತ್ತೇವೆ ಎಂದು ಪ್ರತಿಭಟನಕಾರರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.