ತುಮಕೂರು: ಕುಣಿಗಲ್ ತಾಲ್ಲೂಕು ಅಮೃತೂರು ಹೋಬಳಿಯ ಪಡುವಗೆರೆ ಗ್ರಾಮ ಪಂಚಾಯಿತಿಯ ಬೆಟ್ಟಹಳ್ಳಿ ಗ್ರಾಮದ ಗ್ರಾಮ ಪಂಚಾಯಿತಿಯ ಸಾಮಾನ್ಯ ಸ್ಥಾನ ₹1 ಕೋಟಿಗೆ ಹರಾಜಾಗಿದೆ ಎನ್ನುವ ಬಗ್ಗೆ ‘ಪ್ರಜಾವಾಣಿ’ಯಲ್ಲಿ ಡಿ.11ರಂದು ಬಂದ ವರದಿಯ ಬಗ್ಗೆ ಉಪವಿಭಾಗಾಧಿಕಾರಿಯು ಜಿಲ್ಲಾಧಿಕಾರಿಗೆ ತನಿಖಾ ವರದಿ ಸಲ್ಲಿಸಿದ್ದಾರೆ.
ಕುಣಿಗಲ್ ತಹಶೀಲ್ದಾರ್ ಮತ್ತು ಡಿವೈಎಸ್ಪಿ ಸ್ಥಳಕ್ಕೆ ಭೇಟಿ ನೀಡಿ ನಡೆಸಿದ ತನಿಖೆ ಆಧರಿಸಿ ಉಪವಿಭಾಗಾಧಿಕಾರಿಯು ಈ ವರದಿ ಸಲ್ಲಿಸಿದ್ದಾರೆ.
ದಾಖಲೆಗಳನ್ನು ಪರಿಶೀಲಿಸಲಾಗಿದೆ. ಈ ಸುದ್ದಿ ಸತ್ಯಕ್ಕೆ ದೂರವಾಗಿದೆ. ಅಲ್ಲದೆ ಬಹಳ ಸೂಕ್ಷ್ಮವಾಗಿದೆ. ಈ ಎಲ್ಲ ಕಾರಣದಿಂದ ಎಲ್ಲ ಅಭ್ಯರ್ಥಿಗಳ ಪಾನ್ಕಾರ್ಡ್ಗಳನ್ನು ಸಂಗ್ರಹಿಸಲು ಕ್ರಮಕೈಗೊಳ್ಳಲಾಗಿದೆ. ಪಟ್ಟಲದಮ್ಮ ದೇವಸ್ಥಾನ ಟ್ರಸ್ಟ್ನ ಬ್ಯಾಂಕ್ ಖಾತೆಯ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಹಣಕಾಸಿನ ವಿಚಾರದಲ್ಲಿ ಸಂಶಯಾಸ್ಪದ ವ್ಯವಹಾರಗಳು ಕಂಡು ಬಂದಲ್ಲಿ ಮುಂದಿನ ಕ್ರಮಕೈಗೊಳ್ಳಬಹುದು ಎಂದು ವರದಿಯಲ್ಲಿ ತಿಳಿಸಿದ್ದಾರೆ.
ಗ್ರಾಮದ ಸಾಮಾನ್ಯ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿರುವ ಜಯರಾಮ್ ಬೆಂಗಳೂರಿನಲ್ಲಿ ಮತ್ತು ಗ್ರಾಮದಲ್ಲಿ ವಾಸವಾಗಿದ್ದಾರೆ. ಮತ್ತೊಬ್ಬ ಅಭ್ಯರ್ಥಿ ಶೇಖರ್ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಗ್ರಾಮದ ಪಟ್ಟಲದಮ್ಮ ದೇವಾಲಯ ಜೀರ್ಣೋದ್ಧಾರಕ್ಕೆ ₹ 1.35 ಕೋಟಿ ಅಗತ್ಯವಾಗಿದ್ದು ಜಯರಾಮ್, ಅಭಿವೃದ್ಧಿ ಸಮಿತಿಯ ಸದಸ್ಯರಾಗಿದ್ದಾರೆ. ಇವರಿಗೆ ಕೋಟಿ ಹಣ ನೀಡುವಷ್ಟು ಶಕ್ತಿ ಇಲ್ಲ. ಇವರಿಂದ ಖುದ್ದು ಹೇಳಿಕೆ ಪಡೆಯಲಾಗಿದೆ.
ಶೇಖರ್ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ರಾಜಕೀಯವಾಗಿ ಬಲಾಢ್ಯರಾಗಿದ್ದಾರೆ. ಇವರು ಈ ರೀತಿ ಸುಳ್ಳು ಸುದ್ದಿಯನ್ನು ಮಾಧ್ಯಮಕ್ಕೆ ತಿಳಿಸಿದ್ದಾರೆ ಎಂದು ಗ್ರಾಮಸ್ಥರು ಹೇಳಿರುವುದಾಗಿ ವರದಿಯಲ್ಲಿ ತಿಳಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.