ತುಮಕೂರು: ನಗರ ಹೊರವಲಯದ ಜಾಸ್ಟೋಲ್ ಸಮೀಪ ಗುರುವಾರ ಬೆಳಿಗ್ಗೆ ನಡೆದ ಅಪಘಾತದಿಂದ ಬೆಂಗ
ಳೂರು– ತುಮಕೂರು ನಡುವಿನ ಸಂಚಾರ ಅಸ್ತವ್ಯಸ್ತವಾಯಿತು. ಹೆದ್ದಾರಿಯಲ್ಲಿಯೇ ವಾಹನಗಳು ಸಾಲುಗಟ್ಟಿದವು.
ತುಮಕೂರು ಮಾರ್ಗವಾಗಿ ಬೆಂಗ ಳೂರಿಗೆ ತೆರಳುತ್ತಿದ್ದವರು ಮತ್ತು ಬೆಂಗಳೂರಿನಿಂದ ತುಮಕೂರು ಮಾರ್ಗವಾಗಿ ಪ್ರಯಾಣಿಸುತ್ತಿದ್ದ ವಾಹನ ಸವಾರರು, ಪ್ರಯಾಣಿಕರು ರಸ್ತೆಯಲ್ಲೇ ನಿಲ್ಲಬೇಕಾಯಿತು.
ಆಗಿದ್ದೇನು: ಚಿತ್ರದುರ್ಗ ಕಡೆಯಿಂದ ಬೆಂಗಳೂರಿಗೆ ಟೊಮೆಟೊ ತುಂಬಿಕೊಂಡು ಕ್ಯಾಂಟರ್ ತೆರಳುತ್ತಿತ್ತು. ಜಾಸ್ಟೋಲ್ ಸಮೀಪ ರಸ್ತೆಬದಿ ನಿಂತಿದ್ದ ಲಾರಿಗೆ ಕ್ಯಾಂಟರ್ ಹಿಂದಿನಿಂದ ಡಿಕ್ಕಿಯಾಗಿದೆ. ಚಳ್ಳಕೆರೆ ತಾಲ್ಲೂಕು ಎನ್.ದೇವರಹಳ್ಳಿ ಗ್ರಾಮದ ಕ್ಯಾಂಟರ್ ಚಾಲಕ ಶಂಕರನಾಯಕ್ (40) ಹಾಗೂ ಶಿವಣ್ಣ (45) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಶೋಕ್ ತೀವ್ರವಾಗಿ ಗಾಯಗೊಂಡಿದ್ದು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು.
ಕ್ಯಾಂಟರ್ ಮುಂಭಾಗ ಪೂರ್ಣ ನಜ್ಜುಗುಜ್ಜಾಗಿದೆ. ಹೆದ್ದಾರಿಯಲ್ಲಿ ಟೊಮೆಟೊ ಪೂರ್ಣವಾಗಿ ಚೆಲ್ಲಾಡಿದವು. ಈ ಅಪಘಾತದ ಕಾರಣ ಸಂಚಾರ ದಟ್ಟಣೆ ಉಂಟಾಯಿತು. ಸ್ಥಳಕ್ಕೆ ಪೊಲೀಸರು ಬರುವವರೆಗೂ ಈ ದಟ್ಟಣೆ ಹೆಚ್ಚಿತ್ತು. ಸಂಚಾರಿ ಠಾಣೆ ಪಿಎಸ್ಐ ಶ್ರೀನಿವಾಸ್ ಮತ್ತು ಸಿಬ್ಬಂದಿ ಭೇಟಿ ನೀಡಿ ಶವಗಳನ್ನು ಕ್ಯಾಂಟರ್ನಿಂದ ಹೊರತೆಗೆದು ಆಸ್ಪತ್ರೆಗೆ ಸಾಗಿಸಿದರು.
ಇಷ್ಟೆಲ್ಲ ಪ್ರಕ್ರಿಯೆ ಪೂರ್ಣವಾಗಲು ಒಂದು ತಾಸು ಸಮಯ ಹಿಡಿಯಿತು. ಆದರೆ ಸಾಲುಗಟ್ಟಿದ್ದ ವಾಹನಗಳು ತೆರವಾಗಿ ಸಂಚಾರ ಯಥಾಸ್ಥಿತಿಗೆ ಬರಲು ಎರಡು ತಾಸು ತೆಗೆದುಕೊಂಡಿತು.
‘ಅಪಘಾತ ನಡೆದ ತಕ್ಷಣ ಲಾರಿ ಚಾಲಕ ಲಾರಿಯನ್ನು ಅಲ್ಲಿಂದ ತೆಗೆದು ಕೊಂಡು ಹೋಗಿದ್ದಾರೆ’ ಎಂದು ಸಂಚಾರಿ ಠಾಣೆ ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.