ADVERTISEMENT

ಯಳನಡು ಗ್ರಾಮದ ಬಳಿ ಚಿರತೆ ಸೆರೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2020, 4:04 IST
Last Updated 17 ಸೆಪ್ಟೆಂಬರ್ 2020, 4:04 IST
ಪಂಜರದಲ್ಲಿ ಬಂಧಿಯಾದ ಚಿರತೆ...
ಪಂಜರದಲ್ಲಿ ಬಂಧಿಯಾದ ಚಿರತೆ...   

ಹುಳಿಯಾರು: ಹೋಬಳಿ ವ್ಯಾಪ್ತಿಯ ಯಳನಡು ಗ್ರಾಮದ ಬಳಿ ಅರಣ್ಯ ಇಲಾಖೆಯಿಂದ ಇಟ್ಟಿದ್ದ ಬೋನಿಗೆ ಬುಧವಾರ ಚಿರತೆ ಸೆರೆಯಾಗಿದೆ.

ಬುಕ್ಕಾಪಟ್ಟಣ ಅರಣ್ಯ ಪ್ರದೇಶಕ್ಕೆ ಸೇರಿದ ಯಳನಡು ಗ್ರಾಮದ ಬಳಿಯ ಕಾಚನಕಟ್ಟೆ ಗಂಗಮ್ಮನ ಕೆರೆ ಸುತ್ತಮುತ್ತ ಚಿರತೆ ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಭೀತಿ ಉಂಟಾಗಿತ್ತು. ಈ ಬಗ್ಗೆ ಅರಣ್ಯ ಇಲಾಖೆಗೆ ದೂರು ನೀಡಿದ್ದರು.

ಗ್ರಾಮದ ಸುತ್ತಮುತ್ತ ಹಾಗೂ ಕೆರೆಯಲ್ಲಿ ಜಾಲಿ ಸೇರಿದಂತೆ ಬೇಲಿ ಬೆಳೆದಿರುವ ಕಾರಣ ಸಹಜವಾಗಿಯೇ ಚಿರತೆ ಆಗಾಗ ಕಾಣಿಸಿಕೊಂಡು ಮರೆಯಾಗುತ್ತಿತ್ತು. ಹಲವು ಬಾರಿ ರೈತರ ದನ, ಕುರಿ, ಮೇಕೆಗಳನ್ನು ಹೊತ್ತೊಯ್ದಿತ್ತು.

ADVERTISEMENT

ಆದ್ದರಿಂದ 45 ದಿನಗಳ ಹಿಂದೆ ಚಿರತೆ ಸೆರೆಗೆ ಬೋನ್‌ ಇಡಲಾಗಿತ್ತು. ಮಂಗಳವಾರ ರಾತ್ರಿ ಬೇಟೆ ಅರಸಿ ಬಂದ ಚಿರತೆಯೊಂದು ಬೋನಿಗೆ ಬಿದ್ದಿದೆ.

ಸುಮಾರು ಮೂರು ವರ್ಷದ ಗಂಡು ಚಿರತೆಯನ್ನು ತಿಪಟೂರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜೆ.ಜಿ.ರವಿ ಅವರ ಮಾರ್ಗದರ್ಶನದಂತೆ ಬನ್ನೇರುಘಟ್ಟ ಪ್ರಾಣಿ ಸಂಗ್ರಹಾಲಯಕ್ಕೆ ಬಿಡಲಾಯಿತು ಎಂದು ಬುಕ್ಕಾಪಟ್ಟಣ ವಲಯ ಅರಣ್ಯಾಧಿಕಾರಿ ಎಚ್.ಮಲ್ಲಿಕಾರ್ಜುನಪ್ಪ ತಿಳಿಸಿದರು.

ಬುಕ್ಕಾಪಟ್ಟಣ ವಲಯ ಅರಣ್ಯ ಇಲಾಖೆಯ ಉಪವಲಯ ಅರಣ್ಯಾಧಿಕಾರಿಗಳಾದ ಟಿ.ಕಿರಣ್‌, ಸಿದ್ದಲಿಂಗಮೂರ್ತಿ, ಅರಣ್ಯ ರಕ್ಷಕರಾದ ದಿಲೀಪ್‌ಕುಮಾರ್‌, ಆರ್‌.ಶೇಖರ್‌, ಅರಣ್ಯ ವೀಕ್ಷಕ ಸಂತೋಷ್‌ ಸವಣೂರು ಹಾಗೂ ದಿನಗೂಲಿ ನೌಕರಾದ ನಾಗರಾಜು, ನಾಗರಾಜನಾಯ್ಕ, ರಂಗನಾಥ, ಸಂತೋಷ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.