ADVERTISEMENT

ನೇಕಾರರ ತಲುಪದ ‘ನೇಕಾರ್ ಸಮ್ಮಾನ್‌’ | ಕೇಂದ್ರ ಸರ್ಕಾರದ ಗಣತಿ ದೋಷಪೂರಿತ: ಆರೋಪ

ಸಿ.ಗುರುಮೂರ್ತಿ
Published 17 ಮೇ 2020, 8:08 IST
Last Updated 17 ಮೇ 2020, 8:08 IST
ಚಿಕ್ಕನಾಯಕನಹಳ್ಳಿಯಲ್ಲಿ ಕಂಬಳಿ ನೇಕಾರಿಕೆಯಲ್ಲಿ ತೊಡಗಿರುವುದು
ಚಿಕ್ಕನಾಯಕನಹಳ್ಳಿಯಲ್ಲಿ ಕಂಬಳಿ ನೇಕಾರಿಕೆಯಲ್ಲಿ ತೊಡಗಿರುವುದು   

ಚಿಕ್ಕನಾಯಕನಹಳ್ಳಿ: ಕೈಮಗ್ಗ ಉತ್ಪನ್ನಗಳನ್ನು ತಯಾರಿಸುತ್ತಿರುವ ನೇಕಾರರ ನೆರವಿಗಾಗಿ ರಾಜ್ಯ ಸರ್ಕಾರ ಪ್ರಕಟಿಸಿರುವ ‘ನೇಕಾರ್‌ ಸಮ್ಮಾನ್‌’ ಯೋಜನೆಯು ಶೇ 30ರಷ್ಟು ಜನರಿಗೂ ತಲುಪಲಾರದು ಎನ್ನುತ್ತಾರೆ ತಾಲ್ಲೂಕಿನ ನೇಕಾರರು.

ಈ ಯೋಜನೆಯಡಿ ಪ್ರತಿ ವರ್ಷ ತಲಾ ₹2 ಸಾವಿರ ಹಣವನ್ನು ನೇಕಾರರ ಖಾತೆಗಳಿಗೆ ಜಮೆ ಮಾಡಲು ಉದ್ದೇಶಿಸಲಾಗಿದೆ. ಕೇಂದ್ರ ಸರ್ಕಾರದ 4ನೇ ರಾಷ್ಟ್ರೀಯ ಕೈಮಗ್ಗ ಗಣತಿ ಆಧರಿಸಿ ಫಲಾನುಭವಿಗಳನ್ನು ಗುರುತಿಸಿ ಯೋಜನೆ ಅನುಷ್ಠಾನಗೊಳಿಸುವುದಾಗಿ ಘೋಷಿಸಿದೆ. ಇದಕ್ಕೆತಾಲ್ಲೂಕಿನ ನೇಕಾರರು ವಿರೋಧ ವ್ಯಕ್ತಪಡಿಸಿ‌ದ್ದಾರೆ.

ಕೈಮಗ್ಗ ಗಣತಿ ನಡೆದು ಎರಡು ವರ್ಷ ಕಳೆದಿದೆ. ಈ ಪಟ್ಟಿಯಲ್ಲಿ ಸೇರಿರುವ ನೇಕಾರರಿಗಿಂತ ಪಟ್ಟಿಯಿಂದ ಹೊರಗಿರುವವರ ಸಂಖ್ಯೆಯೇ ದೊಡ್ಡದಿದೆ. ಹಾಗಾಗಿ ಈ ಪಟ್ಟಿ ಈಗ ಅಪ್ರಸ್ತುತ. ತಾಲ್ಲೂಕಿನಲ್ಲಿ ಮೂರು ಸಾವಿರಕ್ಕೂ ಹೆಚ್ಚು ನೇಕಾರರಿದ್ದಾರೆ. ಆದರೆ ಪಟ್ಟಿಯಲ್ಲಿರುವವರು ಕೇವಲ 599 ಎನ್ನುವುದು ನೇಕಾರರ ಆರೋಪ.

ADVERTISEMENT

‘20 ವರ್ಷಗಳಿಂದ ನೇಕಾರಿಕೆಯಲ್ಲಿ ತೊಡಗಿಸಿಕೊಂಡಿದ್ದೇವೆ. ಆದರೆ ನಮಗೆ ಸಮೀಕ್ಷೆ ನಡೆಸಿರುವುದರ ಬಗ್ಗೆ ತಿಳಿದೇ ಇಲ್ಲ. ರಾಜ್ಯ, ಕೇಂದ್ರ ಸರ್ಕಾರ ನೇಕಾರರಿಗೆ ಘೋಷಿಸುವ ಬಹುತೇಕ ಯೋಜನೆಗಳು ಈ ಸಮೀಕ್ಷೆಯನ್ನೇ ಆಧರಿಸಿರುತ್ತವೆ. ಹಾಗಾಗಿ ಸರ್ಕಾರದ ಎಲ್ಲ ಸೌಲಭ್ಯಗಳಿಂದಲೂ ವಂಚಿತರಾಗುತ್ತಿದ್ದೇವೆ’ ಎನ್ನುತ್ತಾರೆ ಗಿರೀಶ್‌.

‘2018ರ ನಂತರ ಸಾವಿರಾರು ನೇಕಾರರು, ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗೆ ಸರ್ಕಾರ ನೇಕಾರಿಕೆಗೆ ಉತ್ತೇಜನ ನೀಡುತ್ತಿರುವುದರಿಂದ ಅನೇಕರು ಸಾಲ ಮಾಡಿ ಕೈ ಮಗ್ಗ, ವಿದ್ಯುತ್ ಚಾಲಿತ ಮಗ್ಗಗಳನ್ನು ಖರೀದಿಸಿದ್ದಾರೆ. ಆದರೂ ಅವರು ಸರ್ಕಾರದ ಲೆಕ್ಕದಲ್ಲಿ ನೇಕಾರರಲ್ಲ’ ಎನ್ನವುದು ವಾಸು ಅವರ ಅಳಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.