ತುಮಕೂರು: ತಾಲ್ಲೂಕಿನ ಬಡೆಸಾಬ್ ಪಾಳ್ಯದಲ್ಲಿ ಗಂಡು ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ತಾಲ್ಲೂಕಿನ ಹೆಬ್ಬೂರು ಸಮೀಪದ ಬನ್ನಿಕುಪ್ಪೆಯಿಂದ 8 ಕಿ.ಮೀ ದೂರದ ಬಡೆಸಾಬ್ ಪಾಳ್ಯದಲ್ಲಿ ಇಂದು ಮುಂಜಾನೆ ಈ ಚಿರತೆಯನ್ನು ಸೆರೆ ಹಿಡಿಯಲಾಗಿದೆ.ಹೆಬ್ಬೂರು, ಬನ್ನಿಕುಪ್ಪೆ ಸುತ್ತಮುತ್ತ ಚಿರತೆಗಳು ಆಗಿಂದಾಗ್ಗೆ ಕಾಣಿಸಿಕೊಳ್ಳುತ್ತಾ ಜನರಲ್ಲಿ ಆತಂಕ ಸೃಷ್ಟಿಸಿದ್ದವು. ದನ, ಕರು, ನಾಯಿಗಳ ಮೇಲೆ ದಾಳಿ ನಡೆಸಿಭಯ ಹುಟ್ಟಿಸಿದ್ದವು. ಒಂದು ನರಭಕ್ಷಕ ಚಿರತೆ ಬನ್ನಿಕುಪ್ಪೆ ಬಳಿ ಬಾಲಕನ ಮೇಲೆ ದಾಳಿ ಮಾಡಿ ಕೊಂದಿತ್ತು.
ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯಿಂದ ಹೆಬ್ಬೂರು, ಬನ್ನಿಕುಪ್ಪೆ ಸುತ್ತಮುತ್ತಾ ಚಿರತೆಗಳಿವೆ ಇಂದು ಅಂದಾಜಿಸಿ, ಅವುಗಳನ್ನು ಸೆರೆ ಹಿಡಿಯಲು ಹಲವೆಡೆ ಬೋನ್ಗಳನ್ನು ಇಡಲಾಗಿತ್ತು. ಬಡೆಸಾಬ್ ಪಾಳ್ಯದ ಅರಣ್ಯ ಪ್ರದೇಶದಲ್ಲಿ ಬೋನ್ನಲ್ಲಿದ್ದ ನಾಯಿ ತಿನ್ನಲು ಬಂದ ವೇಳೆ ಚಿರತೆ ಸೆರೆಯಾಗಿದೆ. ಇದೀಗ ಸೆರೆಯಾಗಿರುವ ಚಿರತೆ ಬನ್ನಿಕುಪ್ಪೆ ಬಾಲಕನ ಮೇಲೆ ದಾಳಿ ಮಾಡಿದ ಚಿರತೆಯೇ ಎಂಬ ಖಚಿತ ಮಾಹಿತಿ ಅರಣ್ಯ ಇಲಾಖೆಗೆ ಸಿಕ್ಕಿಲ್ಲ.
ಮುಂದುವರಿಯಲಿದೆ ಕಾರ್ಯಾಚರಣೆ:
ಅರಣ್ಯ ಇಲಾಖೆಯಿಂದ ಈವರೆಗೆ 2 ಚಿರತೆಗಳನ್ನು ಸೆರೆ ಹಿಡಿಯಲಾಗಿದೆ. ಡಿಸೆಂಬರ್ 25 ರಂದು ಒಂದು ಚಿರತೆ ಸೆರೆ ಹಿಡಿಯಲಾಗಿತ್ತು. ಚಿರತೆಗಳನ್ನು ಸೆರೆಹಿಡಿಯುವ ಕಾರ್ಯಾಚರಣೆ ಮುಂದುವರಿಸಲಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಗಿರೀಶ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.