ಗುಬ್ಬಿ: ‘ಮಂಡಿಯವರು ಹಮಾಲಿಗಳ ಮೂಲಕ ಪಡಿಕಾಯಿ ಲೆಕ್ಕದಲ್ಲಿ ಒಂದು ಗುಡ್ಡೆಗೆ 25ರಿಂದ 40 ಕಾಯಿಗಳವರೆಗೆ ತೆಗೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ ರೈತರು ಭಾನುವಾರ ಚೇಳೂರು ಎಪಿಎಂಸಿ ಆವರಣದಲ್ಲಿ ದಿಢೀರ್ ಪ್ರತಿಭಟನೆ ನಡೆಸಿದರು.
ಹರಾಜಿಗೂ ಮುನ್ನ ರೈತರು ಗುಡ್ಡೆ ಸುರಿದಿರುವ ಕಾಯಿಗಳಲ್ಲಿ ಯಾವುದೇ ಲೆಕ್ಕವಿಲ್ಲದೆ ಸುಮ್ಮನೆ ಕಾಯಿಗಳನ್ನು ತೆಗೆದುಕೊಳ್ಳುತ್ತಾರೆ. ಹರಾಜು ನಂತರ ಮಂಡಿ ವರ್ತಕರು ಕಮಿಷನ್ ಪಡೆಯುತ್ತಾರೆ. ಇದು ಯಾವ ರೀತಿಯ ಲೆಕ್ಕ ಎನ್ನುವುದು ತಿಳಿಯುತ್ತಿಲ್ಲ. ದಲ್ಲಾಳಿಗಳು ಹಾಗೂ ಮಂಡಿಯವರು ರೈತರನ್ನು ಶೋಷಿಸುತ್ತಿದ್ದಾರೆ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಈ ಮೊದಲು ಸಾವಿರಕ್ಕೆ ಇಂತಿಷ್ಟು ಕಾಯಿ ಎಂದು ಪಡೆಯುತ್ತಿದ್ದರು. ಆದರೆ ಇತ್ತೀಚೆಗೆ ಎಣಿಕೆಗೂ ಮುಂಚೆ ಅವರಿಗೆ ಬೇಕಾದ ಗುಣಮಟ್ಟದ ಕಾಯಿಗಳನ್ನೇ ಆಯ್ಕೆ ಮಾಡಿಕೊಳ್ಳುವ ಮೂಲಕ ರೈತರಿಗೆ ಅನ್ಯಾಯವೆಸಗಲು ಮುಂದಾಗಿದ್ದಾರೆ. ತಾಲ್ಲೂಕಿನಲ್ಲಿಯೇ ದೊಡ್ಡ ಮಾರುಕಟ್ಟೆಯಾಗಿದ್ದರೂ ಎಪಿಎಂಸಿಯಲ್ಲಿ ಯಾವುದೇ ಅಧಿಕಾರಿಗಳು ಹಾಗೂ ಸಿಬ್ಬಂದಿ ನೇಮಿಸಿಲ್ಲ ಎಂದು ದೂರಿದರು.
ಎಪಿಎಂಸಿಯಲ್ಲಿರುವ ಏಕೈಕ ಹೊರಗುತ್ತಿಗೆ ನೌಕರ ಅವರಿಗೆ ಇಷ್ಟ ಬಂದಾಗ ಬಂದು ಹೋಗುತ್ತಾರೆ. ಗುಬ್ಬಿ ಎಪಿಎಂಸಿ ಕಾರ್ಯದರ್ಶಿಯೇ ಚೇಳೂರಿನ ಉಸ್ತುವಾರಿ ನೋಡಿಕೊಳ್ಳಬೇಕಿರುವುದರಿಂದ ಅವರ ಬಿಡುವಿನ ವೇಳೆಯಲ್ಲಿ ಮಾತ್ರ ಬಂದು ಹೋಗುತ್ತಾರೆ. ರೈತರು ಅವರ ಕಷ್ಟಗಳನ್ನು ಯಾರ ಬಳಿ ಹೇಳಿಕೊಳ್ಳಬೇಕು ಎಂದು ಪ್ರಶ್ನಿಸಿದರು.
ಇತ್ತೀಚೆಗೆ ತೆಂಗಿಗೆ ರೋಗಭಾದೆ ಹೆಚ್ಚಿದೆ. ಇಳುವರಿ ಕಡಿಮೆ ಆಗಿದೆ. ಮಾರುಕಟ್ಟೆಯಲ್ಲಿ ದರ ಏರುತ್ತಿರುವ ಸಂದರ್ಭದಲ್ಲಿಯೇ ಮಂಡಿಯವರು ಅವರಿಗೆ ಬೇಕಾದಂತೆ ಕಾಯಿಗಳನ್ನು ತೆಗೆದುಕೊಳ್ಳುವ ಮೂಲಕ ರೈತರ ಮೇಲೆ ಪ್ರಹಾರ ನಡೆಸಲು ಮುಂದಾಗಿದ್ದಾರೆ. ಸಂಬಂಧಿಸಿದ ಅಧಿಕಾರಿಗಳಿಗೆ ಈ ವಿಚಾರ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು ತುರ್ತು ಕ್ರಮ ಕೈಗೊಳ್ಳದಿದ್ದರೆ ಎಪಿಎಂಸಿ ಮುಂಬಾಗ ರೈತರು ಸೇರಿಕೊಂಡು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮಂಡಿ ದಲ್ಲಾಳಿಗಳಿಗೆ ಎಷ್ಟು ಕಮಿಷನ್ ನೀಡಬೇಕು ಹಾಗೂ ಎಷ್ಟು ಕಾಯಿಗಳನ್ನು ತೆಗೆದುಕೊಳ್ಳಬೇಕು ಎಂಬ ಬಗ್ಗೆ ರೈತರಿಗೆ ಯಾವುದೇ ಮಾಹಿತಿ ಇಲ್ಲ. ರೈತರಲ್ಲಿ ಜಾಗೃತಿ ಮೂಡಿಸಲು ಯಾವುದೇ ಅಧಿಕಾರಿ ಹಾಗೂ ಸಿಬ್ಬಂದಿ ಎಪಿಎಂಸಿಯಲ್ಲಿ ಇಲ್ಲ. ಹೀಗೆ ಮುಂದುವರೆದಲ್ಲಿ ರೈತರ ಗತಿ ಏನು ಎಂದು ಕಿಡಿ ಕಾರಿದರು.
ಪ್ರತಿಭಟನೆಯಲ್ಲಿ ರೈತರು, ಸಾರ್ವಜನಿಕರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.