ಚಿಕ್ಕನಾಯಕನಹಳ್ಳಿ: ದೃಢೀಕರಣ ಪತ್ರ ನೀಡಲು ₹ 50 ಲಂಚ ಪಡೆದ ವೈದ್ಯೆಯನ್ನು ಜಿಲ್ಲಾ ವೈದ್ಯಾಧಿಕಾರಿ ಡಾ.ಬಿ.ಆರ್.ಚಂದ್ರಿಕಾ ವರ್ಗಾವಣೆ ಮಾಡಿದ್ದಾರೆ ಹಾಗೂ ಜಿಲ್ಲೆಯ ಯಾವ ವೈದ್ಯರೂ ಲಂಚಕ್ಕೆ ಕೈ ಚಾಚದಂತೆ ಎಚ್ಚರಿಕೆಯ ಆದೇಶ ಹೊರಡಿಸಿದ್ದಾರೆ.
ತಾಲ್ಲೂಕಿನ ಶೆಟ್ಟಿಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಾಗಿ ಕೆಲಸ ನಿರ್ವಹಿಸುತ್ತಿದ್ದ ಡಾ.ರಾಧಿಕಾ ಶಾಲಾ ದಾಖಲೆಗಳ ದೃಢೀಕರಣಕ್ಕಾಗಿ ಸಹಿ ಪಡೆಯಲು ಬಂದ ವ್ಯಕ್ತಿಯಿಂದ ₹ 50 ಲಂಚಪಡೆಯುತ್ತಿದ್ದಾಗ ಆಸ್ಪತ್ರೆಗೆ ಬಂದ ವ್ಯಕ್ತಿಯೊಬ್ಬರು ಮೊಬೈಲ್ನಲ್ಲಿ ಚಿತ್ರಿಕರಿಸಿ ಸಾಮಾಜಿಕ ಜಾಲತಾಣಕ್ಕೆ ಹರಿ ಬಿಟ್ಟಿದ್ದರು.
ವಾಟ್ಸ್ ಆ್ಯಪ್ ಗುಂಪುಗಳಲ್ಲಿ ಈ ಬಗ್ಗೆ ಟೀಕೆ ವ್ಯಕ್ತವಾಗಿತ್ತು. ಎಚ್ಚೆತ್ತ ಜಿಲ್ಲಾ ವೈದ್ಯಾಧಿಕಾರಿ ಡಾ.ಬಿ.ಆರ್.ಚಂದ್ರಿಕಾ ಲಂಚ ಪಡೆದ ವೈದ್ಯೆಯನ್ನು ಹುಳಿಯಾರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವರ್ಗಾಯಿಸಿ ಆದೇಶ ನೀಡಿದ್ದಾರೆ. ಅಲ್ಲದೆ ಈ ಪ್ರಕರಣವನ್ನು ಉಲ್ಲೇಖಿಸಿ ಜಿಲ್ಲೆಯ ಎಲ್ಲ ವೈದ್ಯರಿಗೂ ಎಚ್ಚರಿಕೆಯ ನೋಟಿಸ್ ನೀಡಿದ್ದಾರೆ.
ಲಂಚ ಪಡೆದು ವರ್ಗಾವಣೆಯಾಗಿರುವ ವೈದ್ಯೆ ಡಾ.ರಾಧಿಕಾ ಅವರು ಹಿಂದೆ ಪ್ರಭಾರ ತಾಲ್ಲೂಕು ವೈದ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.