ADVERTISEMENT

ತುಮಕೂರು | ಸಂಘಟಿತರಾಗಲು ಸಹಕಾರ ಸಂಘ ನೆರವು: ಪರಮೇಶ್ವರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2023, 7:45 IST
Last Updated 18 ಸೆಪ್ಟೆಂಬರ್ 2023, 7:45 IST
ತುಮಕೂರಿನಲ್ಲಿ ಭಾನುವಾರ ನಡೆದ ಹರ್ತಿ ಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಅವರನ್ನು ಸನ್ಮಾನಿಸಲಾಯಿತು. ಸಹಕಾರ ಸಂಘದ ಉಪಾಧ್ಯಕ್ಷ ಮೋಹನ್‌ಕುಮಾರ್‌, ನಿರ್ದೇಶಕರಾದ ಬಿ.ಜಿ.ನಿಂಗರಾಜು, ಬಿ.ಎಸ್‌.ದಿನೇಶ್‌, ವೈ.ದಾಸಪ್ಪ ಇತರರು ಇದ್ದಾರೆ
ತುಮಕೂರಿನಲ್ಲಿ ಭಾನುವಾರ ನಡೆದ ಹರ್ತಿ ಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಅವರನ್ನು ಸನ್ಮಾನಿಸಲಾಯಿತು. ಸಹಕಾರ ಸಂಘದ ಉಪಾಧ್ಯಕ್ಷ ಮೋಹನ್‌ಕುಮಾರ್‌, ನಿರ್ದೇಶಕರಾದ ಬಿ.ಜಿ.ನಿಂಗರಾಜು, ಬಿ.ಎಸ್‌.ದಿನೇಶ್‌, ವೈ.ದಾಸಪ್ಪ ಇತರರು ಇದ್ದಾರೆ   

ತುಮಕೂರು: ಎಲ್ಲರನ್ನು ಸಮಾನತೆಯ ದೃಷ್ಟಿಯಿಂದ ನೋಡಿದರೆ ಯಾವುದೇ ಮೀಸಲಾತಿ ಬೇಕಾಗಿಲ್ಲ. ವರ್ಗೀಕರಣ ಮಾಡದೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಸಮಾನ ಭಾವದಿಂದ ಕಂಡರೆ ಮೀಸಲಾತಿಯ ಅವಶ್ಯಕತೆ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಅಭಿಪ್ರಾಯಪಟ್ಟರು.

ನಗರದಲ್ಲಿ ಭಾನುವಾರ ನಡೆದ ಹರ್ತಿ ಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು.

ಸಮುದಾಯದ ಪರ ಧ್ವನಿ ಎತ್ತಲು ಸಂವಿಧಾನ ಅವಕಾಶ ಕಲ್ಪಿಸಿದೆ. ರಾಜಕೀಯ ಮೀಸಲಾತಿಯಿಂದ ಒಂದಷ್ಟು ಬದಲಾವಣೆಯಾಗಿದೆ. ಡಾ.ಬಿ.ಆರ್‌.ಅಂಬೇಡ್ಕರ್‌ ವಿಚಾರಗಳನ್ನು ಸ್ಮರಿಸುವುದು, ಅದರಂತೆ ನಡೆದುಕೊಳ್ಳುವುದು ಇಂದು ಅಗತ್ಯ. ಭಾರತದ ಸಂವಿಧಾನ ಪ್ರಪಂಚದ ಅತ್ಯುತ್ತಮ ಸಂವಿಧಾನ. ಸಂವಿಧಾನ ಪೀಠಿಕೆಯ ಓದುವ ಕಾರ್ಯಕ್ರಮದ ಮೂಲಕ ಸರ್ಕಾರ ಸಮಾನತೆಯ ಪರವಾಗಿ ನಿಂತಿದೆ ಎಂಬ ಸಂದೇಶ ನೀಡಿದ್ದೇವೆ ಎಂದು ಹೇಳಿದರು.

ADVERTISEMENT

ಸಮುದಾಯದ ಜನರು ಸಂಘಟಿತರಾಗಲು ರಾಜಕೀಯ ಶಕ್ತಿಯ ಜತೆ ಸಹಕಾರ ಸಂಘ ನೆರವಾಗಲಿದೆ. ಸಂಘದ ಕುರಿತು ಯಾರಲ್ಲೂ ತಾತ್ಸಾರ ಭಾವನೆ ಇರಬಾರದು. ಹರ್ತಿ ಪತ್ತಿನ ಸಹಕಾರ ಸಂಘದಲ್ಲಿ ₹2.70 ಕೋಟಿ ಬಾಕಿ ಸಾಲ ಇದೆ. ಸಾಲ ಪಡೆದ ಸದಸ್ಯರು ಶೀಘ್ರವಾಗಿ ಅದನ್ನು ವಾಪಸ್‌ ನೀಡಬೇಕು. ಇದರಿಂದ ಮತ್ತೊಬ್ಬರಿಗೆ ಅನುಕೂಲವಾಗಲಿದೆ ಎಂದರು.

ಉರಿಲಿಂಗ ಪೆದ್ದಿ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ, ಮಹಾನಗರ ಪಾಲಿಕೆಯ ಮೇಯರ್‌ ಎಂ.ಪ್ರಭಾವತಿ, ಹರಿಕಥಾ ವಿದ್ವಾನ್‌ ಲಕ್ಷ್ಮಣದಾಸ್‌, ಸಹಕಾರ ಸಂಘದ ಉಪಾಧ್ಯಕ್ಷ ಮೋಹನ್‌ಕುಮಾರ್‌, ನಿರ್ದೇಶಕರಾದ ಬಿ.ಜಿ.ನಿಂಗರಾಜು, ಬಿ.ಎಸ್‌.ದಿನೇಶ್‌, ವೈ.ದಾಸಪ್ಪ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.