ತುಮಕೂರು: ವಾರ್ಡ್ ನಂ 15ರಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನು ಮುಂದಿನ 15 ದಿನಗಳಲ್ಲಿ ಮುಗಿಸಿ, ಸಾರ್ವಜನಿಕರ ಓಡಾಟಕ್ಕೆ ಅನುಕೂಲ ಮಾಡಿಕೊಡುವಂತೆ ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ ಅವರು ಸ್ಮಾರ್ಟ್ಸಿಟಿ ಅಧಿಕಾರಿಗಳಿಗೆ ಸೂಚಿಸಿದರು.
ಪಾಲಿಕೆ ಸದಸ್ಯೆ ಹಾಗೂ ನಾಗರಿಕರಿಂದ ದೂರು ಬಂದಿದ್ದರಿಂದ ಮಂಗಳವಾರ ವಾರ್ಡ್ನ ರಸ್ತೆಗಳನ್ನು ಪರಿಶೀಲಿಸಿದರು. ಈ ವೇಳೆ ನಾಗರಿಕರು ಸಿಎಸ್ಐ ಲೇಔಟ್, ಎಸ್.ಎಸ್.ಪುರಂನ ಹಲವು ರಸ್ತೆಗಳಲ್ಲಿ ಪೈಪ್ಲೈನ್ ಕಾಮಗಾರಿ, ಡಕ್ ನಿರ್ಮಾಣಕ್ಕೆ ಅಗೆದಿರುವ ಜಾಗವನ್ನು ಸರಿಯಾಗಿ ಮುಚ್ಚಿಲ್ಲ. ಇದರಿಂದ ಸಂಚರಿಸಲು ತೊಂದರೆಯಾಗುತ್ತಿದೆ. ಎಸ್.ಎಸ್.ಪುರಂ ಮೊದಲನೇ ಕ್ರಾಸ್ನ ಬಾಲಾಜಿ ನರ್ಸಿಂಗ್ ಹೋಂ ಬಳಿ ಗುಂಡಿ ತೆಗೆದು ವಾರಗಳೇ ಕಳೆದರೂ ಮುಚ್ಚಿಲ್ಲ ಎಂದು ದೂರಿದರು.
ಇದರಿಂದ ಆ ಭಾಗದಲ್ಲಿ ಆಂಬುಲೆನ್ಸ್ ಓಡಾಟಕ್ಕೆ ತೊಂದರೆಯಾಗಿದೆ ಎಂದು ವೈದ್ಯರೇ ಆಯುಕ್ತರಿಗೆ ದೂರಿದರು. ಸಾರ್ವಜನಿಕರ ಮನವಿಯನ್ನು ಆಲಿಸಿದ ಆಯುಕ್ತರು ಸ್ಥಳಕ್ಕೆ ಸ್ಮಾರ್ಟ್ ಸಿಟಿ ಎಂಜಿನಿಯರ್ ಕರೆಯಿಸಿ ಮುಂದಿನ 15 ದಿನಗಳಲ್ಲಿ ಕೆಲಸ ಪೂರ್ಣಗೊಳ್ಳದಿದ್ದರೆ ನಿಮ್ಮ ವಿರುದ್ಧ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಎಚ್ಚರಿಕೆ ನೀಡಿದರು.
ಮುಂದಿನ ಶುಕ್ರವಾರ ಸ್ಮಾರ್ಟ್ಸಿಟಿ ಕಾಮಗಾರಿಗಳ ಪ್ರಗತಿ ಬಗ್ಗೆ ಶಾಸಕರ ನೇತೃತ್ವದಲ್ಲಿ ಸಭೆ ನಡೆಯಲಿದೆ. ಆ ವೇಳೆಯೂ ಜನರಿಗೆ ಆಗುತ್ತಿರುವ ತೊಂದರೆಯನ್ನು ಗಮನಕ್ಕೆ ತಂದು, ತ್ವರಿತವಾಗಿ ಪೂರ್ಣಗೊಳಿಸಲು ಸೂಚಿಸಲಾಗುವುದು ಎಂದು ಆಯುಕ್ತರು ಭರವಸೆ ನೀಡಿದರು.
ಉಪಮೇಯರ್ ಶಶಿಕಲಾ, ಸದಸ್ಯೆ ಗಿರಿಜಾ, ಎಂಜಿನಿಯರ್ ನೇತ್ರಾವತಿ, ವಾರ್ಡ್ ಮುಖಂಡ ಜಿ.ಕೆ.ಶ್ರೀನಿವಾಸ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.