
ತುಮಕೂರು: ಸ್ವಾತಂತ್ರ್ಯ ಪೂರ್ವದಲ್ಲಿದ್ದ ಅಸಮಾನತೆಯ ಕರಾಳ ದಿನಗಳು ಈಗ ಕಣ್ಮರೆಯಾಗಿವೆ. ಸಂವಿಧಾನ ಎಲ್ಲರಿಗೂ ಉನ್ನತ ಸ್ಥಾನ, ಗೌರವ, ಮಾತನಾಡುವ, ಹೋರಾಡುವ ಹಕ್ಕು ಕೊಟ್ಟಿದೆ ಎಂದು ಹಿಮಾಚಲ ಪ್ರದೇಶದ ಹೈಕೋರ್ಟ್ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಲ್.ನಾರಾಯಣಸ್ವಾಮಿ ಹೇಳಿದರು.
ವಿಶ್ವವಿದ್ಯಾಲಯದಲ್ಲಿ ಸೋಮವಾರ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದಿಂದ ಸಂವಿಧಾನ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ‘ಭಾರತ ಸಂವಿಧಾನದ ನೈಜ ಅನುಷ್ಠಾನದ ಅಗತ್ಯತೆ’ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಸಂವಿಧಾನ ಭಾರತ ದೇಶದ ಧರ್ಮ. ಸಂವಿಧಾನದ ಸಕಾರಾತ್ಮಕ ಬಳಕೆ, ರಕ್ಷಣೆ ಪ್ರಜೆಗಳಿಂದ ಮಾತ್ರ ಸಾಧ್ಯ. ಪ್ರತಿ ಮನೆಯಲ್ಲಿ ಸಂವಿಧಾನ ದಿನ ಆಚರಿಸಬೇಕು ಎಂದರು.
ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು, ‘ಸಂವಿಧಾನದ ಆಶಯದ ವಿರುದ್ಧ ಹೋಗುವುದು ಕಾನೂನು ಪ್ರಕಾರವಲ್ಲದೆ ನೈತಿಕವಾಗಿಯೂ ತಪ್ಪು. ರಾಜಕೀಯ, ಸಾಮಾಜಿಕ, ಆರ್ಥಿಕ ಪ್ರಜಾಪ್ರಭುತ್ವ ಸ್ಥಾಪಿಸಬೇಕು. ಸ್ವಾತಂತ್ರ್ಯ ಪೂರ್ವದಲ್ಲಿ ಶೇ 70ರಷ್ಟಿದ್ದ ಬಡತನದ ಪ್ರಮಾಣ ಈಗ ಶೇ 27ಕ್ಕೆ ಇಳಿದಿದೆ. ಎಲ್ಲವೂ ಸಂವಿಧಾನದಿಂದ ಸಾಧ್ಯವಾಗಿವೆ’ ಎಂದು ತಿಳಿಸಿದರು.
ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸಾ, ಅಂಬೇಡ್ಕರ್ ಅಧ್ಯಯನ ಕೇಂದ್ರದ ಸಂಯೋಜಕ ಚಿಕ್ಕಣ್ಣ, ಕೆ.ಆರ್.ದೇವರಾಜು ಇತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.