ಹುಳಿಯಾರು: ಕೊಬ್ಬರಿ ಬೆಲೆ ಕುಸಿತದಿಂದ ತೆಂಗು ಬೆಳೆಗಾರರ ಸ್ಥಿತಿ ಸಂಕಷ್ಟಕ್ಕೀಡಾಗಿದೆ. ಬೆಲೆ ಏರಿಕೆಗೆ ಮುಂದಾಗಬೇಕು ಎಂದು ಚಿಕ್ಕನಾಯಕನಹಳ್ಳಿ ತಾಲ್ಲೂಕು ಕೃಷಿಕ ಸಮಾಜ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.
ಈಗಾಗಲೇ ₹8 ಸಾವಿರಕ್ಕಿಂತ ಕಡಿಮೆಯಾಗಿದ್ದು ರೈತರು ಕಂಗಾಲಾಗಿದ್ದಾರೆ. ಕಳೆದ ಒಂದು ವರ್ಷದಿಂದಲೂ ಬೆಲೆ ಏರಿಕೆ ಕಂಡಿಲ್ಲ. ಅಲ್ಲದೆ, ಕಳೆದ ವರ್ಷ ಅಧಿಕ ಮಳೆಯಾದ ಕಾರಣ ತೆಂಗು ಹಾಳಾಗುವ ಸ್ಥಿತಿ ಬಂದಿದೆ. ತೆಂಗು ಬೆಳೆಗಾರರು ಅಧಿಕ ಖರ್ಚು ಮಾಡಿ ತೆಂಗು ಬೆಳೆದು ಬೀದಿಗೆ ಬಂದಿದ್ದಾರೆ. ತೆಂಗು ಬೆಳೆಗಾರರು ಬಹುತೇಕ ಸಾಲಗಾರರಾಗಿದ್ದು ಜೀವನ ಸಾಗಿಸುವುದು ಕಷ್ಟವಾಗಿದೆ. ಸರ್ಕಾರ ಈಗಾಗಲೇ ನಫೆಡ್ ಮೂಲಕ ಕೊಬ್ಬರಿ ಖರೀದಿಸುತ್ತಿದ್ದು ರೈತರ ನೆರವಿಗೆ ಬರುತ್ತಿಲ್ಲ. ಅದರಲ್ಲೂ, ಸಣ್ಣ ರೈತರು ನಪೆಡ್ ಮೂಲಕ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಕೂಡಲೇ ಸರ್ಕಾರ ತೆಂಗು ಬೆಳೆಗಾರರತ್ತ ಗಮನಹರಿಸಿ ಅವರನ್ನು ಸಂಕಷ್ಟದಿಂದ ಪಾರು ಮಾಡುವಂತೆ ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಬಿ.ಎಲ್.ರೇಣುಕಪ್ರಸಾದ್ ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.