ADVERTISEMENT

ಕೊರೊನಾ: ರೋಗಿ ವಿರುದ್ಧ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 14 ಜೂನ್ 2020, 16:47 IST
Last Updated 14 ಜೂನ್ 2020, 16:47 IST

ಶಿರಾ: ಹಿಂದೂಪುರಕ್ಕೆ ಹೋಗಿ ಬಂದಿದ್ದ ಮಾಹಿತಿ ಮುಚ್ಚಿಟ್ಟ ಕಾರಣಕ್ಕಾಗಿ ಕೊರೊನಾ ಸೋಂಕಿತ (ರೋಗಿ–5813) ವ್ಯಕ್ತಿಯ ವಿರುದ್ಧ ಶಿರಾ ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಪಾರ್ಕ್‌ ಮೊಹಲ್ಲಾದ ವ್ಯಕ್ತಿ ಸರ್ಕಾರಿ ನಿಯಮದಂತೆ ಸೇವಾ ಸಿಂಧು ಆ್ಯಪ್‌ನಲ್ಲಿ ನೋಂದಣಿ ಮಾಡಿಕೊಳ್ಳದೆ ನಿಯಮಬಾಹಿರವಾಗಿ ದ್ವಿಚಕ್ರವಾಹನದಲ್ಲಿ ಆಂಧ್ರಪ್ರದೇಶದ ಹಿಂದೂಪುರದ ತನ್ನ ಮಾವನ ಮನೆಗೆ ಪತ್ನಿ ಹಾಗೂ ಮಕ್ಕಳ ಜೊತೆಯಲ್ಲಿ ತೆರಳಿದ್ದರು.

ಅಲ್ಲಿಂದ ವಾಪಸ್‌ ಬಂದ ನಂತರ ಆ ವ್ಯಕ್ತಿಗೆ ಜ್ವರ, ಕೆಮ್ಮು, ನೆಗಡಿ ಕಾಣಿಸಿಕೊಂಡಿತ್ತು. ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ಬಂದ ಸಮಯದಲ್ಲಿ ಕೊರೊನಾ ಪರೀಕ್ಷೆ ಮಾಡಿದಾಗ ಸೋಂಕು ದೃಢಪಟ್ಟಿದೆ. ಜತೆಗೆ ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದ 6 ಮಂದಿಯಲ್ಲೂ ಸೊಂಕು ದೃಢಪಟ್ಟಿದೆ.

ADVERTISEMENT

ಸರ್ಕಾರಿ ನಿಯಮಗಳನ್ನು ಉಲ್ಲಂಘಿಸಿ ಕಾನೂನು ಬಾಹಿರವಾಗಿ ತನ್ನ ಹೆಂಡತಿ, ಮಕ್ಕಳೊಂದಿಗೆ ಹಿಂದೂಪುರಕ್ಕೆ ಹೋಗಿ ಬಂದಿರುವುದು ಹಾಗೂ ಈ ವಿಚಾರವನ್ನು ಮರೆಮಾಚಿ ಸೋಂಕು ಹರಡಿ ಇತರರ ಆರೋಗ್ಯಕ್ಕೆ ಕಂಟಕವಾದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಂಶಿಕೃಷ್ಣ ಅವರ ನಿರ್ದೇಶನದಂತೆ ಶಿರಾ ನಗರ ಠಾಣೆಯ ಸಿಪಿಐ ನಿರ್ಮಲ ಪ್ರಕರಣ ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.