ADVERTISEMENT

ಮದರಸಾ ನಡೆಸುತ್ತಿದ್ದ ವ್ಯಕ್ತಿ; ತುಂಬು ಕುಟುಂಬ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2020, 13:54 IST
Last Updated 27 ಮಾರ್ಚ್ 2020, 13:54 IST

ಶಿರಾ: ಕೋವಿಡ್ -19 ರೋಗದಿಂದ ಮೃತಪಟ್ಟ ವ್ಯಕ್ತಿ ನಗರದವರು ಎನ್ನುವುದು ಇಲ್ಲಿನ ಜನರಲ್ಲಿ ನಾನಾ ರೀತಿಯಲ್ಲಿ ಭಯಕ್ಕೆ ಕಾರಣವಾಗಿದೆ.

ಈ ವ್ಯಕ್ತಿ ನಗರದಲ್ಲಿ ಮದರಸಾ ನಡೆಸುತ್ತಿದ್ದರು. ಮೃತರಿಗೆ ಇಬ್ಬರು ಪತ್ನಿಯರಿದ್ದು ಮೊದಲ ಪತ್ನಿ 3 ತಿಂಗಳ ಹಿಂದೆ ಮೃತಪಟ್ಟಿದ್ದರು. ಮೊದಲ ಪತ್ನಿಗೆ 9 ಹಾಗೂ ಎರಡನೇ ಪತ್ನಿಗೆ 6 ಮಂದಿ ಮಕ್ಕಳು ಇದ್ದಾರೆ. ಇವರಲ್ಲಿ 6 ಮಂದಿ ಹೆಣ್ಣು ಮಕ್ಕಳು ಮತ್ತು ಇಬ್ಬರು ಗಂಡು ಮಕ್ಕಳಿಗೆ ವಿವಾಹವಾಗಿದೆ. ಉಳಿದವರು ಅವಿವಾಹಿತರು. 12 ಮಂದಿ ಮೊಮ್ಮಕ್ಕಳನ್ನು ಹೊಂದಿರುವ ತುಂಬು ಕುಟುಂಬ ಇವರದ್ದು.

ನವದೆಹಲಿಯಿಂದ ಬಂದ ನಂತರ ಇವರು ನಗರದ ಎರಡು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದರು. ವೈದ್ಯರ ಸಲಹೆ ನಿರ್ಲಕ್ಷಿಸಿ ಶಿರಾದಲ್ಲಿ ಒಡಾಡಿಕೊಂಡಿದ್ದರು.

ADVERTISEMENT

ಇವರು ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ನಗರದಲ್ಲಿ ಆತಂಕ ಮನೆ ಮಾಡಿದೆ. ಇವರ ಕುಟುಂಬದ 11 ಮಂದಿಯನ್ನು ಶಿರಾದ ತಾಯಿ ಮತ್ತು ಮಗು ಆಸ್ಪತ್ರೆಯಲ್ಲಿ ನಿಗಾದಲ್ಲಿ ಇರಿಸಲಾಗಿದೆ. ಚಿಕಿತ್ಸೆ ನೀಡಿದ್ದ ಇಬ್ಬರು ಖಾಸಗಿ ವೈದ್ಯರು, ನರ್ಸ್, ಲ್ಯಾಬ್ ಟೆಕ್ನಿಶಿಯನ್, ಎಕ್ಸರೆ ಟೆಕ್ನಿಶಿಯನ್ ಅವರನ್ನು ಮನೆಯಲ್ಲಿಯೇ ನಿಗಾ ಘಟಕದಲ್ಲಿ ಇಡಲಾಗಿದೆ.

ಮದರಸಾ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಹಲವು ಜನರ ಸಂಪರ್ಕ ಹೊಂದಿದ್ದರು. ಜೊತೆಗೆ ದೆಹಲಿಯಿಂದ ಬಂದ ನಂತರ ಹಲವರ ಜೊತೆಯಲ್ಲಿ ಓಡಾಟ ನಡೆಸಿರುವುದರಿಂದ ಸೊಂಕು ಯಾರಿಗೆಲ್ಲ ಹರಡಿರಬಹುದು ಎನ್ನುವ ಅನುಮಾನ ಜನರನ್ನು ಕಾಡುತ್ತಿದೆ.

ಇಡೀ ನಗರವೇ ಈಗ ದಿಗ್ಬಂಧನದ ಸ್ಥಿತಿಯಲ್ಲಿ ಇದೆ. ಮೃತರ ಮನೆಯನ್ನು ಸಂಪರ್ಕಿಸುವ ರಸ್ತೆಗಳಲ್ಲಿ ಜನರ ಓಡಾಟ ಇಲ್ಲದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.