ಕೊಡಿಗೇನಹಳ್ಳಿ: ಕುಟುಂಬದ ನಿರ್ವಹಣೆಯನ್ನು ತನ್ನ ದುಡಿಮೆಯಿಂದಲೇ ಮುನ್ನಡೆಸುತ್ತಿದ್ದ ವ್ಯಕ್ತಿ ಈಗ ಕೋವಿಡ್ನಿಂದ ಮೃತಪಟ್ಟಿರುವುದರಿಂದ ಕುಟುಂಬವು ಆಸರೆಯೇ ಇಲ್ಲದೆ ತಬ್ಬಲಿಯಾಗಿದೆ.
ಹೋಬಳಿಯ ತೆರಿಯೂರು ಗ್ರಾಮದ ಟಿ.ಎನ್.ಮೂರ್ತಿ (38) ಟ್ರ್ಯಾಕ್ಟರ್ ಚಾಲಕನಾಗಿ ವೃತ್ತಿ ಆರಂಭಿಸಿದ್ದರು. ಆದರೆ ಅದರಿಂದ ಬರುವ ಆದಾಯದಲ್ಲಿ ವಯಸ್ಸಾದ ತಂದೆ, ತಾಯಿ, ಪತ್ನಿ ಮತ್ತು ಮೂವರು ಮಕ್ಕಳನ್ನು ಸಾಕುವುದು ದುಸ್ಸಾಧ್ಯವಾಯಿತು. ಆಗ ಗ್ರಾಮದಲ್ಲೇ ಚಿಕ್ಕದಾಗಿ ಅಂಗಡಿ ತೆರೆದು ಅದರಲ್ಲೇ ಗೋಬಿ ಮಂಚೂರಿ, ಆಮ್ಲೆಟ್ ತಯಾರಿಸಿ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.
ಕೋವಿಡ್ನಿಂದಾಗಿ ಮೂರ್ತಿ ಮೃತಪಟ್ಟಿದ್ದು, ಕುಟುಂಬ ಆಧಾರ ಸ್ತಂಭವನ್ನೇ ಕಳೆದುಕೊಂಡಿದೆ. ಕುಟುಂಬಸ್ಥರ ಬದುಕು ಬೀದಿ ಪಾಲಾಗಿದೆ.
‘ಮೊದಲಿನಿಂದಲೂ ಬಡತನದಲ್ಲಿ ಬೆಳೆದವರಾದರೂ ಮಗನನ್ನು ಕಷ್ಟದಲ್ಲೇ ಸಾಕಿ ಮದುವೆ ಮಾಡಿದ್ದೆವು. ನನಗೆ ವಯಸ್ಸಾಗಿದೆ ಕೆಲಸ ಮಾಡಲು ಆಗುವುದಿಲ್ಲ. ಗಂಡನಿಗೆ ಆರೋಗ್ಯ ಸರಿಯಿಲ್ಲ. ಹಲವು ವರ್ಷಗಳಿಂದ ಮಗನೇ ದುಡಿದು ನಮ್ಮನ್ನು, ಸೊಸೆ ಮತ್ತು ಮೊಮ್ಮಕ್ಕಳನ್ನು ಚನ್ನಾಗಿ ನೋಡಿಕೊಳ್ಳುತ್ತಿದ್ದ. ಈಗ ಅಂತಹ ದುಡಿಯುವ ಕೈ ಮುರಿದಿರುವುದರಿಂದ ನಮಗೆಲ್ಲ ದಿಕ್ಕು ತೋಚದಂತಾಗಿದೆ’ ಎಂದು ಮೂರ್ತಿಯ ತಾಯಿ ಲಕ್ಷ್ಮಿನರಸಮ್ಮ ಹೇಳಿದರು.
**
ದುಡಿಯುವ ಮಗ ಕಣ್ಣ ಮುಂದೆಯೇ ಮೃತಪಟ್ಟಿದ್ದು, ಕೈಕಾಲು ಕುಸಿದಂತಾಗಿದೆ. ಎಳೆ ಮಕ್ಕಳನ್ನು ಕಟ್ಟಿಕೊಂಡು ಸೊಸೆ ಹೇಗೆ ಬದುಕುತ್ತಾಳೆ ಎಂಬ ಚಿಂತೆ ಕಾಡುತ್ತಿದೆ. ಸರ್ಕಾರ, ಸಂಘ-ಸಂಸ್ಥೆಗಳ ಆಸರೆಯಾಗಬೇಕಿದೆ.
-ಡಿ.ನರಸಿಂಹಯ್ಯ, ಮೂರ್ತಿಯ ತಂದೆ
***
ಕುಟುಂಬವನ್ನು ಹೇಗೆ ನಿರ್ವಹಿಸಬೇಕೆಂದು ದಿಕ್ಕು ತೋಚದಂತಾಗಿದೆ. ಕೂಲಿ ಕೆಲಸಕ್ಕಾದರೂ ಹೋಗೋಣವೆಂದರೆ ಅನಾರೋಗ್ಯ ಪೀಡಿತ ಮಾವ, ಚಿಕ್ಕ ಮಕ್ಕಳನ್ನು ಬಿಟ್ಟು ಹೋಗಲಾರದ ಅಸಹಾಯಕತೆ ಸೃಷ್ಟಿಯಾಗಿದೆ.
-ಅನಿತಾ, ಮೂರ್ತಿಯ ಪತ್ನಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.