
ತುಮಕೂರು: ‘ವಿಬಿ– ಜಿ ರಾಮ್ ಜಿ’ ಮಸೂದೆ ವಾಪಸ್ ಪಡೆಯುವಂತೆ ಒತ್ತಾಯಿಸಿ ಸಿಪಿಐ ಪಕ್ಷದಿಂದ ನಗರದ ಬಿಎಸ್ಎನ್ಎಲ್ ಕಚೇರಿ ಮುಂಭಾಗ ಸೋಮವಾರ ಪ್ರತಿಭಟನೆ ನಡೆಯಿತು.
‘ಕೇಂದ್ರ ಸರ್ಕಾರವು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ (ನರೇಗಾ) ಹೆಸರು ಬದಲಾಯಿಸಿದೆ. ಯೋಜನೆಯಿಂದ 12 ಕೋಟಿ ನರೇಗಾ ಕಾರ್ಮಿಕರು ಬದುಕು ಕಟ್ಟಿಕೊಂಡಿದ್ದಾರೆ. ಇದರ ಸ್ವರೂಪ ಬದಲಿಸುವ ಮೂಲಕ ಕೆಲಸಕ್ಕೆ ಕೊಳ್ಳಿ ಇಡಲಾಗುತ್ತಿದೆ. ಕೂಲಿ ಕಾರ್ಮಿಕರ ಉದ್ಯೋಗ ಕಾಪಾಡಬೇಕು. ಈಗಾಗಲೇ ಮಂಡಿಸಿರುವ ‘ವಿಬಿ– ಜಿ ರಾಮ್ ಜಿ’ ಮಸೂದೆ ಹಿಂಪಡೆಯಬೇಕು’ ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಗಿರೀಶ್ ಆಗ್ರಹಿಸಿದರು.
ರಾಷ್ಟ್ರದ ಬಡತನ ನಿರ್ಮೂಲನೆಗೆ ನರೇಗಾ ಯೋಜನೆ ಅನುಷ್ಠಾನಕ್ಕೆ ತರಲಾಗಿತ್ತು. ಗಾಂಧೀಜಿ ಸ್ವಾತಂತ್ರ್ಯ ಹೋರಾಟದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ಅವರ ಹೆಸರು ಕೈ ಬಿಟ್ಟಿರುವುದು ಬಡವರಿಗೆ ಮಾಡಿದ ದ್ರೋಹ. ಇಂತಹ ಮಸೂದೆಗೆ ರಾಷ್ಟ್ರಪತಿಗಳು ಅಂಕಿತ ಹಾಕಿರುವುದು ಸರಿಯಲ್ಲ ಎಂದರು.
ಸಿಪಿಐ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಕಂಬೇಗೌಡ, ‘ಸರ್ಕಾರ ದೇಶದ ಸಂವಿಧಾನಕ್ಕೆ ಬದ್ಧವಾಗಿರುವ ಹೆಸರು ಸೂಚಿಸದೆ ರಾಮನ ಹೆಸರು ಮುನ್ನೆಲೆಗೆ ತಂದಿದೆ. ಮಂಡನೆಯಾದ ಮಸೂದೆಯಲ್ಲಿ ಹಲವು ಸುಳ್ಳುಗಳಿವೆ’ ಎಂದು ದೂರಿದರು.
ಸಿಪಿಐ ಪದಾಧಿಕಾರಿಗಳಾದ ಗೋವಿಂದರಾಜು, ಅಶ್ವತ್ಥ ನಾರಾಯಣ, ರಾಜೇಶ್, ಜಾಫರ್ ಷರೀಫ್, ಭೋಜರಾಜು, ಮಂಜುನಾಥ್, ವೆಂಕಟೇಶ್, ಎನ್.ಕೆ.ರಾಜಣ್ಣ, ಸುರೇಶ್ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.