ತುಮಕೂರು: ಹೊಸ ವರ್ಷ ಆರಂಭದಲ್ಲಿಯೇ ನಗರ ಕೆಲವು ಕಡೆಗಳಲ್ಲಿ ಅವಘಡಗಳನ್ನೂ ಹೊತ್ತು ತಂದಿದೆ. ನಗರದ ಲೂರ್ದ್ ಮಾತಾ ಚರ್ಚ್ ಬಳಿ ಸೋಮವಾರ ತಡರಾತ್ರಿ ಹೊಸ ವರ್ಷದ ಆಚರಣೆಯಲ್ಲಿ ತೊಡಗಿದ್ದಾಗ ಬಲೂನ್ಗೆ ಗಾಳಿ ತುಂಬುವ ಸಿಲಿಂಡರ್ ಸ್ಫೋಟವಾಗಿ 7 ಜನರು ಗಾಯಗೊಂಡಿದ್ದಾರೆ.
ಶಿರಾಗೇಟ್ ನಿವಾಸಿ ಕಿರಣ್ ಬಾಬು, ಬಿದಿರುಮಳೆ ತೋಟದ ನಿವಾಸಿಗಳಾದ ಮರಿಯಾದಾಸ್, ಥಾಮಸ್, ಸುದೀಪ್, ಮಾರಮ್ಮ ನಗರದ ಆ್ಯಂಟನಿ ಫ್ರಾನ್ಸಿಸ್, ಭಾಗ್ಯ ಮಂದಿರ ಬಡಾವಣೆಯ ರವಿ, ಶಾಂತಿನಗರ ಡಿಪೊ ನಿವಾಸಿ ಶಾಯಿದ್ ಗಾಯಗೊಂಡವರು.
ತೀವ್ರವಾಗಿ ಗಾಯಗೊಂಡಿದ್ದ ಮರಿಯಾದಾಸ್ ಮತ್ತು ಕಿರಣ್ ಬಾಬು ಅವರನ್ನು ಬೆಂಗಳೂರಿಗೆ ಚಿಕಿತ್ಸೆಗೆ ಕಳುಹಿಸಲಾಯಿತು. ಉಳಿದವರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಚರ್ಚ್ ಮುಖ್ಯದ್ವಾರದ ಪಕ್ಕ ಬಲೂನ್ ಮಾರಾಟ ಮಾಡುವ ವ್ಯಕ್ತಿ ಸಿಲಿಂಡರ್ ಇಟ್ಟುಕೊಂಡಿದ್ದ. ಜನರು ಚರ್ಚ್ ಒಳಗೆ ಹೋಗುತ್ತಿದ್ದಾಗ ಸಿಲಿಂಡರ್ ಸ್ಫೋಟಿಸಿದೆ. ಒಂದು ಕ್ಷಣ ಜನರು ಭಯಗೊಂಡು ದಿಕ್ಕಾಪಾಲಾಗಿ ಓಡಿದರು. ಗಾಯಾಳುಗಳನ್ನು ಆಟೊದಲ್ಲಿ ಆಸ್ಪತ್ರೆಗೆ ದಾಖಲಿಸಲಾಯಿತು. ಗಾಯಾಳುಗಳ ಸಂಬಂಧಿಕರು ರೋದಿಸುತ್ತಿದ್ದರು. ಸಮೀಪದಲ್ಲಿಯೇ ಇದ್ದ ವಾಹನಗಳ ಬಿಡಿ ಭಾಗಗಳು ಕಿತ್ತು ಬಂದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.