ತುಮಕೂರು: ಮೀಟರ್ ಬಡ್ಡಿ ದಂಧೆಕೋರರ ಕಿರುಕುಳಕ್ಕೆ ಹೆದರಿ ಗೃಹಿಣಿ ರೂಪಶ್ರೀ (28) ಎಂಬುವವರು ನಗರದ ದೋಬಿಘಾಟ್ನ ಮನೆಯಲ್ಲಿ ಗುರುವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ದೋಬಿಘಾಟ್ನ ಲಕ್ಷ್ಮಿ, ಮಮತಾ, ಬಾಬು, ಮಂಜಣ್ಣ ಎಂಬುವವರು ಮೀಟರ್ ಬಡ್ಡಿ ವ್ಯವಹಾರ ಮಾಡುತ್ತಿದ್ದು, ಅವರು ರೂಪಶ್ರೀ ಮೂಲಕ ಅಕ್ಕಪಕ್ಕದ ಮನೆಯ ಪರಿಚಯಸ್ಥ ಮಹಿಳೆಯರಿಗೆ ಸಾಲ ಕೊಡಿಸಿದ್ದರು. ಅವರಿಂದ ಶೇ 10ರಂತೆ ಬಡ್ಡಿ ವಸೂಲು ಮಾಡುತ್ತಿದ್ದರು ಎಂದು ರೂಪಶ್ರೀ ತಂದೆ ಶಿವರುದ್ರಯ್ಯ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ರೂಪಶ್ರೀ ಅವರಿಂದ ಸಾಲ ಪಡೆದವರು ಹಣ ಹಿಂತಿರುಗಿಸದೆ ಕೈ ಎತ್ತಿದಾಗ ಮೀಟರ್ ಬಡ್ಡಿ ದಂಧೆಕೋರರು ರೂಪಶ್ರೀಗೆ ಕಿರುಕುಳ ನೀಡಲು ಆರಂಭಿಸಿದರು. ಹಣ ಕೊಡಬೇಕಿರುವ ಹಾಗೂ ಕಿರುಕುಳ ಕೊಡುತ್ತಿದ್ದವರ ಕುರಿತು ರೂಪಶ್ರೀ ಪುಸ್ತಕದಲ್ಲಿ ಬರೆದಿದ್ದು, ಅದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗುತ್ತಿದೆ. ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ರೂಪಶ್ರೀ ಅವರಿಗೆ ಪತಿ, ಮೂವರು ಮಕ್ಕಳು ಇದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.