ತುರುವೇಕೆರೆ: ಶಿಂಷಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಚೆಕ್ ಡ್ಯಾಂನಲ್ಲಿ ಮುಳುಗಿ ಮೂವರು ಮೃತಪಟ್ಟ ಪ್ರಕರಣ ತಾಲ್ಲೂಕಿನ ಮಾಯಸಂದ್ರ ಹೋಬಳಿಯ ಮಣೆಚಂಡೂರ್ ಸಮೀಪದ ಬಳಿ ಭಾನುವಾರ ಸಂಭವಿಸಿದೆ.
ಮಣೆಚಂಡೂರ್ ಗ್ರಾಮದ ನವೀನ್ ಮಂಜುನಾಥ್ (19), ವಿದ್ಯಾರ್ಥಿ ಮಂಜು ಗೋವಿಂದಯ್ಯ (20) ಹಾಗು ಚನ್ನರಾಯಪಟ್ಟಣ ತಾಲ್ಲೂಕಿನ ನುಗ್ಗೇಹಳ್ಳಿಯ ಜೆಸಿಬಿ ಆಪರೇಟರ್ ವೇದ ಮಂಜಣ್ಣ (22) ಮೃತರು.
ಏತ ನೀರಾವರಿಗಾಗಿ ಚೆಕ್ಡ್ಯಾಂನಲ್ಲಿ ಹೇಮಾವತಿ ನಾಲೆಯಿಂದ ನೀರು ತುಂಬಿಸಲಾಗಿತ್ತು. ಐವರು ಸ್ನೇಹಿತರು ಈಜಲು ನೀರಿಗೆ ಇಳಿದಿದ್ದಾಗ ಮೂವರು ಮುಳುಗಿದ್ದಾರೆ. ಇನ್ನಿಬ್ಬರು ಪಾರಾಗಿದ್ದಾರೆ. ವೇದ ಮತ್ತು ಮಂಜು ಶವ ಪತ್ತೆಯಾಗಿವೆ. ನವೀನ್ ಶವಕ್ಕಾಗಿ ಶೋಧ ಕಾರ್ಯ ನಡೆದಿದೆ. ಸುತ್ತಲಿನ ಹಳ್ಳಿಗಳ ನೂರಾರು ಜನರು ಜಮಾಯಿಸಿದ್ದರು. ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.