ತುಮಕೂರು: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ, ದುಪ್ಪಟ್ಟು ಲಾಭ ಗಳಿಸಬಹುದು ಎಂಬ ಆಮಿಷಕ್ಕೆ ಒಳಗಾಗಿ ನಗರದ ವಿದ್ಯಾನಗರದ ಉದ್ಯಮಿ ಎ.ಎಂ.ಮಂಜುನಾಥ ಎಂಬುವರು ₹5.50 ಲಕ್ಷ ಕಳೆದುಕೊಂಡಿದ್ದಾರೆ.
ಆರೋಪಿ ವಾಟ್ಸ್ ಆ್ಯಪ್ ಮುಖಾಂತರ ಸಂಪರ್ಕಿಸಿ ಷೇರು ಮಾರುಕಟ್ಟೆಯ ಬಗ್ಗೆ ತಿಳಿಸಿದ್ದಾರೆ. https;//m.optinexmarkets.net/ ಲಿಂಕ್ ಕಳುಹಿಸಿದ್ದು, ಮಂಜುನಾಥ ಸದರಿ ಲಿಂಕ್ ಕ್ಲಿಕ್ ಮಾಡಿ, ಅಗತ್ಯ ದಾಖಲೆ ಸಲ್ಲಿಸಿ, ಖಾತೆ ತೆರೆದಿದ್ದಾರೆ. optinexmarkets ಹೆಸರಿನಲ್ಲಿರುವ ಚಿನ್ನ ಮತ್ತು ಬೆಳ್ಳಿ ಷೇರುಗಳ ಮೇಲೆ ಹಣ ಹೂಡಿಕೆ ಮಾಡಿದರೆ ಉತ್ತಮ ಲಾಭ ದೊರೆಯುತ್ತದೆ ಎಂದಿದ್ದಾರೆ.
ಆರೋಪಿ ಮಾತು ನಂಬಿದ ಮಂಜುನಾಥ ಮೊದಲಿಗೆ ₹50 ಸಾವಿರ ಹೂಡಿಕೆ ಮಾಡಿದ್ದು, ಲಿಂಕ್ನಲ್ಲಿ ₹4,400 ಲಾಭ ಬಂದಿರುವುದಾಗಿ ತೋರಿಸಿದೆ. ದೊಡ್ಡ ಮೊತ್ತದ ಹೂಡಿಕೆ ಮಾಡಿದರೆ ಒಳ್ಳೆಯ ಲಾಭ ಸಿಗುತ್ತದೆ ಎಂದು ವಂಚಕರು ಹೇಳಿದ್ದಾರೆ. ಹಂತ ಹಂತವಾಗಿ ಒಟ್ಟು ₹5.50 ಲಕ್ಷ ಹಣ ಆರೋಪಿಗಳು ತಿಳಿಸಿದ ಖಾತೆಗೆ ವರ್ಗಾವಣೆ ಮಾಡಿದ್ದಾರೆ.
ಹಣ ವಿತ್ ಡ್ರಾ ಮಾಡಲು ಹೋದರೆ, ಇನ್ನೂ ಹೆಚ್ಚಿನ ಹಣ ಹೂಡಿಕೆ ಮಾಡಿದರೆ ಮಾತ್ರ ಹಣ ನೀಡಲಾಗುತ್ತದೆ ಎಂದಿದ್ದಾರೆ. ಲಾಭದ ಆಮಿಷವೊಡ್ಡಿ ವಂಚಿಸಿದವರ ವಿರುದ್ಧ ಕ್ರಮಕೈಗೊಳ್ಳುವಂತೆ ಮಂಜುನಾಥ ಸೈಬರ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.