
ತುರುವೇಕೆರೆ: ತಾಲ್ಲೂಕಿನ ಗೋಣಿತುಮಕೂರಿನ ಅರಸಮ್ಮದೇವಿ ದೇವಾಲಯದಲ್ಲಿ ದಲಿತ ನವಜೋಡಿಗೆ ಪ್ರವೇಶ ನಿರಾಕರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲ್ಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ ಮತ್ತು ಪೊಲೀಸ್ ಇಲಾಖೆ ಮಂಗಳವಾರ ನಡೆಸಿದ ಸಂಧಾನ ಯಶಸ್ವಿಯಾಗಿದೆ.
ದಲಿತರಿಗೆ ದೇವಾಲಯ ಪ್ರವೇಶ ತಿರಸ್ಕರಿಸಿದ ಘಟನೆಯು ತಾಲ್ಲೂಕಿನಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿತ್ತು ಅಲ್ಲದೆ ತಾಲ್ಲೂಕಿನ ದಲಿತ ಹಾಗೂ ಪ್ರಗತಿ ಪರ ಮುಖಂಡರಿಂದ ಬಾರೀ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ
ತಹಶೀಲ್ದಾರ್ ಎಂ.ಎ.ಕುಂಞಅಹಮದ್ ಮಾತನಾಡಿ, ಎಲ್ಲರಿಗೂ ದೇವಾಲಯ ಪ್ರವೇಶಕ್ಕೆ ಅವಕಾಶ ಮಾಡಿಕೊಡಬೇಕು. ಯಾರೊಂದಿಗೂ ಮೌಢ್ಯಾಚರಣೆ, ಕಾನೂನುಬಾಹಿರ ಚಟುವಟಿಕೆ ಅಥವಾ ದೌರ್ಜನ್ಯ ಮಾಡಕೂಡದು. ತಪ್ಪಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
12ನೇ ಶತಮಾನದಲ್ಲಿ ಬಸವಣ್ಣನವರು ಜಾತಿ ತಾರತಮ್ಯ ಹೊಡೆದು ಹಾಕಿ ಅನ್ಯೋನ್ಯತೆಯಿಂದ ಬದುಕಿದ್ದವರು ಎಂಬುದನ್ನು ಅರಿತು ಬಾಳಬೇಕು ಎಂದರು.
ಗ್ರಾಮ ದೇವತೆ ದೇವಾಲಯದ ಮುಂಭಾಗ ಮುಜರಾಯಿ ಇಲಾಖೆಯಿಂದ ನಾಮಫಲಕ ಹಾಕಿಸಿದ್ದು ಯಾವುದೇ ಜಾತಿ, ಧರ್ಮ, ಬೇಧಬಾವ ಮಾಡದೆ ಮುಕ್ತವಾಗಿ ಪ್ರವೇಶಿಸುವ ಅವಕಾಶವಿದೆ. ಇಲ್ಲಿ ಅಸ್ಪೃಶ್ಯತೆ ಆಚರಣೆ ಮಾಡಿದರೆ ಸಂವಿಧಾನ ವಿರೋಧ ಕೆಲಸವಾಗುತ್ತದೆ. ಇಲ್ಲಿನ ಅರ್ಚಕರು ಮುಜರಾಯಿ ಇಲಾಖೆ ಅಡಿಯಲ್ಲಿ ಕೆಲಸ ಮಾಡುತ್ತಿರುವ ಕಾರಣ ಯಾರಿಗೂ ನಿರ್ಬಂಧ ಹೇರುವಂತಿಲ್ಲ. ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಬೇಕು. ಜಿಲ್ಲಾಡಳಿತದಿಂದ ದೇವಾಲಯದ ಮುಂದೆ ಬೀದಿನಾಟಕ ಏರ್ಪಡಿಸಲಾಗುವುದು. ಇದಕ್ಕೆ ಗ್ರಾಮಸ್ಥರು ಸಹಕಾರ ನೀಡಬೇಕು ಎಂದರು.
ದೇವಾಲಯ ಪ್ರವೇಶಕ್ಕೆ ನಿರಾಕರಿಸಿದ ದಲಿತ ದಂಪತಿಗೆ ಪುನಃ ದೇವಾಲಯಕ್ಕೆ ಕರೆಸಿ ಪೂಜೆ ಮಾಡಿಸಲು ಅವಕಾಶ ಮಾಡಿಕೊಡಲಾಯಿತು.
ಇ.ಒ.ಅನಂತರಾಜು, ಪಿಎಸ್ಐ ಟಿ.ಮೂರ್ತಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎಂ.ಶಿವಲಿಂಗಯ್ಯ, ಗ್ರಾಮ ಲೆಕ್ಕಾಧಿಕಾರಿ, ಕಂದಾಯಾಧಿಕಾರಿ, ಪಂಚಾಯಿತಿ ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.