ADVERTISEMENT

ಪರಿಶಿಷ್ಟರಿಗೆ ರಕ್ಷಣೆ: ಪೊಲೀಸ್‌ ಇಲಾಖೆ ವಿಫಲ; ಸಮುದಾಯದ ಮುಖಂಡರು

ಪರಿಶಿಷ್ಟರ ಕುಂದುಕೊರತೆ ಸಭೆಯಲ್ಲಿ ಮುಖಂಡರು ಆಕ್ರೋಶ; ಎಸ್‌.ಪಿ ವಿರುದ್ಧ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 30 ಜುಲೈ 2025, 5:21 IST
Last Updated 30 ಜುಲೈ 2025, 5:21 IST
ತುಮಕೂರಿನಲ್ಲಿ ಮಂಗಳವಾರ ನಡೆದ ಪರಿಶಿಷ್ಟ ಸಮುದಾಯದ ಕುಂದುಕೊರತೆ ಸಭೆ ಬಹಿಷ್ಕರಿಸಲು ಮುಂದಾದ ಮುಖಂಡರು
ತುಮಕೂರಿನಲ್ಲಿ ಮಂಗಳವಾರ ನಡೆದ ಪರಿಶಿಷ್ಟ ಸಮುದಾಯದ ಕುಂದುಕೊರತೆ ಸಭೆ ಬಹಿಷ್ಕರಿಸಲು ಮುಂದಾದ ಮುಖಂಡರು   

ತುಮಕೂರು: ಪರಿಶಿಷ್ಟರಿಗೆ ಸೂಕ್ತ ರಕ್ಷಣೆ ನೀಡುವಲ್ಲಿ ಪೊಲೀಸ್‌ ಇಲಾಖೆ ಸಂಪೂರ್ಣವಾಗಿ ವಿಫಲವಾಗಿದೆ. ಠಾಣೆಗಳಲ್ಲಿ ಕುಂದು ಕೊರತೆ ಸಭೆ ನಡೆಸುತ್ತಿಲ್ಲ, ಸಕಾಲಕ್ಕೆ ದೂರು ಸ್ವೀಕರಿಸುತ್ತಿಲ್ಲ, ದೂರಿಗೆ ಸರಿಯಾದ ಸ್ಪಂದನೆ ಸಿಗುತ್ತಿಲ್ಲ ಎಂದು ಪರಿಶಿಷ್ಟ ಸಮುದಾಯದ ಮುಖಂಡರು ಆಕ್ರೋಶ ಹೊರ ಹಾಕಿದರು.

ನಗರದಲ್ಲಿ ಮಂಗಳವಾರ ಜಿಲ್ಲಾ ಪೊಲೀಸ್ ಇಲಾಖೆಯಿಂದ ಹಮ್ಮಿಕೊಂಡಿದ್ದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜಿಲ್ಲಾ ಮಟ್ಟದ ಕುಂದುಕೊರತೆ ಸಭೆಯಲ್ಲಿ ಪರಿಶಿಷ್ಟರ ಸಾಲು ಸಾಲು ಸಮಸ್ಯೆಗಳು ತೆರೆದುಕೊಂಡವು.

ಸಭೆಯ ಪ್ರಾರಂಭದಲ್ಲಿ ಸಹಿ ಇಲ್ಲದ ಅನುಪಾಲನಾ ವರದಿ ಕಂಡ ಮುಖಂಡರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ವಿ.ಅಶೋಕ್‌ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಇದನ್ನು ನಡಾವಳಿ ಎನ್ನಲು ಸಾಧ್ಯವೇ? ಇಂತಹ ಬೇಜವಾಬ್ದಾರಿ ಯಾಕೆ? ಎಂದು ಪ್ರಶ್ನಿಸಿದರು.

ADVERTISEMENT

1978ರಿಂದ ಸಭೆಗೆ ಬರುತ್ತಿದ್ದೇವೆ, ಇಂತಹ ನಿರ್ಲಕ್ಷ್ಯ ಆಗಿರಲಿಲ್ಲ. ನಾವು ಕೇಳಿದ್ದರಲ್ಲಿ ತಪ್ಪೇನಿದೆ? ಎಂದು ಕುಣಿಗಲ್‌ನ ದಲಿತ್‌ ನಾರಾಯಣ್, ರಾಮಲಿಂಗಪ್ಪ ಪ್ರಶ್ನೆ ಎತ್ತಿದರು. ಇದಕ್ಕೆ ಇತರರು ಧ್ವನಿಗೂಡಿಸಿದರು.

‘ಸಹಿ ಮಾಡಿಕೊಡುತ್ತೇನೆ, ನೀವು ಭಾಷಣ ಮಾಡಬೇಡಿ, ಸಭೆ ಯಾಕೆ ತಡೆಯುತ್ತೀರಿ? ಸುಮ್ಮನೆ ಕುಳಿತುಕೊಳ್ಳಿ, ಇಲ್ಲದಿದ್ದರೆ ಎದ್ದು ಹೋಗಿ’ ಎಂದು ಅಶೋಕ್‌ ಸಿಟ್ಟಾದರು. ಇದರಿಂದ ಮತ್ತಷ್ಟು ಸಿಡಿಮಿಡಿಗೊಂಡ ಮುಖಂಡರು ಸಭೆ ಬಹಿಷ್ಕರಿಸಲು ಮುಂದಾದರು. ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಪೊಲೀಸರು ಮುಖಂಡರನ್ನು ಸಮಾಧಾನಪಡಿಸಿ ಮತ್ತೆ ಸಭೆ ನಡೆಯುವಂತೆ ನೋಡಿಕೊಂಡರು.

ಠಾಣೆಗಳಲ್ಲಿ ಸಭೆ ನಡೆಸಲ್ಲ: ಪ್ರತಿ ತಿಂಗಳು ಎರಡನೇ ಭಾನುವಾರ ಎಲ್ಲ ಠಾಣೆಗಳಲ್ಲಿ ಪರಿಶಿಷ್ಟ ಸಮುದಾಯದ ಕುಂದುಕೊರತೆ ಸಭೆ ನಡೆಸಬೇಕು. ಆದರೆ ಯಾವುದೇ ಠಾಣೆಗಳಲ್ಲಿ ಸಕಾಲಕ್ಕೆ ಸಭೆಗಳು ನಡೆಯುತ್ತಿಲ್ಲ. ಕೆಲವು ಕಡೆಗಳಲ್ಲಿ ಸಭೆ ಕರೆದು, ಅವರಿಗೆ ಬೇಕಾದ ಐದಾರು ಜನರನ್ನು ಕೂರಿಸಿ ಫೋಟೋಗೆ ಫೋಸು ಕೊಡುತ್ತಾರೆ. ಪರಿಶಿಷ್ಟರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಆಗುತ್ತಿಲ್ಲ ಎಂದು ಕಿಡಿಕಾರಿದರು.

‘ಗುಬ್ಬಿ ಠಾಣೆಯಲ್ಲಿ ಮುಸ್ಲಿಂ ಮುಖಂಡರನ್ನು ಕರೆದು ಪರಿಶಿಷ್ಟರ ಸಭೆ ಮಾಡುತ್ತಾರೆ. ಇದು ಯಾವಾಗ ಸರಿದಾರಿಗೆ ಬರುತ್ತದೆ’ ಎಂದು ಗುಬ್ಬಿಯ ಸಂತೋಷ್‌ ಪ್ರಶ್ನಿಸಿದರು. ‘ದಂಡಿನಶಿವರದಲ್ಲಿ 5 ತಿಂಗಳಿನಿಂದ ಸಭೆಯೇ ಆಗಿಲ್ಲ’ ಎಂದು ಮುಖಂಡ ಜಗದೀಶ್‌ ಹೇಳಿದರು. ‘ಬೆಳಿಗ್ಗೆ 10 ಗಂಟೆಗೆ ಸಭೆ ಕರೆಯುತ್ತಾರೆ, ಮಧ್ಯಾಹ್ನ 1 ಗಂಟೆಯಾದರೂ ಇನ್‌ಸ್ಪೆಕ್ಟರ್‌ ಬರುವುದಿಲ್ಲ. ಸಂಜೆ 4 ಗಂಟೆಗೆ ಸಭೆ ನಡೆಸುತ್ತಾರೆ’ ಎಂದು ತುರುವೇಕೆರೆ ಮಹಾಲಿಂಗಯ್ಯ ವಾಸ್ತವ ಬಿಚ್ಚಿಟ್ಟರು.

‘ಯಾಕೆ ಸಭೆ ಕರೆದಿಲ್ಲ ಎಂದು ಪ್ರಶ್ನಿಸಿದರೆ, ಸಭೆ ಮಾಡಲೇಬೇಕು ಎಂಬ ಆದೇಶ ಎಲ್ಲಿದೆ ತೋರಿಸು ಎಂದು ಪಿಎಸ್‌ಐ ನಮಗೆ ಮರುಪ್ರಶ್ನೆ ಹಾಕುತ್ತಾರೆ. ದೂರು ಸಲ್ಲಿಸಲು ಹೋದರೆ ಮೂರು–ನಾಲ್ಕು ಸಲ ಅಲೆದಾಡಿಸುತ್ತಾರೆ’ ಎಂದು ಕಳ್ಳಂಬೆಳ್ಳದ ನಾಗೇಂದ್ರ ಪ್ರಸ್ತಾಪಿಸಿದರು.

‘ಮುಂದಿನ ದಿನಗಳಲ್ಲಿ ಪ್ರತಿ ತಿಂಗಳು ಎರಡನೇ ಭಾನುವಾರ ಬೆಳಿಗ್ಗೆ 11 ಗಂಟೆಗೆ ಸಭೆ ನಡೆಸಲಾಗುವುದು’ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಅಶೋಕ್‌ ಭರವಸೆ ನೀಡಿದರು.

ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿಗಳಾದ ಪುರುಷೋತ್ತಮ್‌, ಸಿ.ಗೋಪಾಲ್‌, ಡಿವೈಎಸ್‌ಪಿಗಳು ಹಾಜರಿದ್ದರು.

ತುಮಕೂರಿನಲ್ಲಿ ಮಂಗಳವಾರ ನಡೆದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಜಿಲ್ಲಾ ಮಟ್ಟದ ಕುಂದುಕೊರತೆ ಸಭೆಯಲ್ಲಿ ಭಾಗವಹಿಸಿದ್ದ ಮುಖಂಡರು

Highlights -

Cut-off box - ಮಾದಿಗರಿಗೆ ದಾರಿ ಬಿಡಲ್ಲ! ಹುಲಿಯೂರುದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯ ಚೌಡನಕುಪ್ಪೆ ಹಂಗರಹಳ್ಳಿ ಬಳಿ ಮಾದಿಗರು ಎಂಬ ಕಾರಣಕ್ಕೆ ಜಮೀನಿಗೆ ಹೋಗಲು ದಾರಿ ಬಿಡುತ್ತಿಲ್ಲ. ಸವರ್ಣೀಯರು ಪ್ರಭಾವಿಗಳಾಗಿದ್ದು ಎರಡು ವರ್ಷದಿಂದ ಉಳಿಮೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ವನಜಾದೇವಿ ಅಳಲು ತೋಡಿಕೊಂಡರು. ಸರ್ಕಾರಿ ಗೋಮಾಳ ಆಕ್ರಮಿಸಿಕೊಂಡು ಕಂದಾಯ ಜಾಗ ಎನ್ನುತ್ತಿದ್ದಾರೆ. ಮೂರು ವರ್ಷಗಳಿಂದ ಠಾಣೆಗೆ ಅಲೆಯುತ್ತಿದ್ದೇನೆ ಯಾವುದೇ ಪ್ರಯೋಜನವಾಗಿಲ್ಲ. 20 ಕುಟುಂಬಗಳಿಗೆ ತೊಂದರೆಯಾಗಿದ್ದು ಈಗಾಗಲೇ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ. ಕಳೆದ ವರ್ಷ ಹೊಲದಲ್ಲಿ ಬೆಳೆದಿದ್ದ ಬೆಳೆಯನ್ನು ಮನೆಗೆ ಸಾಗಿಸಲು ಆಗಲಿಲ್ಲ ಎಂದರು. ‘ಈ ಕುರಿತು ಇವತ್ತೇ ಪ್ರಕರಣ ದಾಖಲಿಸಲಾಗುವುದು. ರಸ್ತೆ ವಿಚಾರದ ಬಗ್ಗೆ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗುವುದು. ಕಾನೂನು ಪ್ರಕಾರ ಮುಂದಿನ ಕ್ರಮಕೈಗೊಳ್ಳಲಾಗುವುದು’ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಕೆ.ವಿ.ಅಶೋಕ್‌ ತಿಳಿಸಿದರು.

Cut-off box - ಡಿಸಿಆರ್‌ಇ ಠಾಣೆ ಕಾರ್ಯಾರಂಭ ನಗರದಲ್ಲಿ ಹೊಸದಾಗಿ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ (ಡಿಸಿಆರ್‌ಇ) ಠಾಣೆ ಆರಂಭವಾಗಿದೆ. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದರ ಮೇಲಿನ ದೌರ್ಜನ್ಯ ತಡೆಗೆ ಕ್ರಮ ವಹಿಸಲು ತಪ್ಪಿತಸ್ಥರಿಗೆ ತ್ವರಿತವಾಗಿ ಶಿಕ್ಷೆಯಾಗುವಂತೆ ನೋಡಿಕೊಳ್ಳುವ ಉದ್ದೇಶದಿಂದ ಪ್ರತ್ಯೇಕ ಠಾಣೆ ಪ್ರಾರಂಭಿಸಲಾಗಿದೆ. ‘ನಗರದ ಶಿರಾಗೇಟ್‌ ಬಳಿ ಕಳೆದ ತಿಂಗಳಿನಿಂದ ಠಾಣೆ ಆರಂಭವಾಗಿದೆ. ದೌರ್ಜನ್ಯಕ್ಕೆ ಒಳಗಾದವರು ನೇರವಾಗಿ ಠಾಣೆಗೆ ಬಂದು ದೂರು ನೀಡಬಹುದು. ಇತರೆ ಠಾಣೆಗಳಲ್ಲಿ ದಾಖಲಾದ ಪ್ರಕರಣಗಳು ಸಹ ಡಿಸಿಆರ್‌ಇಗೆ ವರ್ಗಾಯಿಸಲಾಗುತ್ತವೆ. ನಮ್ಮಲ್ಲಿ ಈವರೆಗೆ ಒಟ್ಟು 21 ಪ್ರಕರಣ ದಾಖಲಿಸಲಾಗಿದೆ’ ಎಂದು ಡಿಸಿಆರ್‌ಇ ಡಿವೈಎಸ್‌ಪಿ ದಿವಾಕರ್‌ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.