ತಿಪಟೂರು: ‘ಭಾರತ ಇಡೀ ಜಗತ್ತಿಗೆ ಜ್ಞಾನದ, ಭಕ್ತಿಯ ಜ್ಯೋತಿಯನ್ನು ನೀಡಿದ ದೇಶವಾಗಿದ್ದು ಜನರು ಆಧ್ಯಾತ್ಮಿಕವಾಗಿ ಹೆಚ್ಚಿನ ಜ್ಞಾನವಂತರಾಗಿದ್ದಾರೆ. ಪ್ರತಿಯೊಬ್ಬರು ಕೊರೊನಾ ದಿನಗಳಲ್ಲಿ ಎಚ್ಚರಿಕೆಯಿಂದ ಇರಬೇಕು’ ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ದಸರೀಘಟ್ಟದ ಆದಿಚುಂಚನಗಿರಿ ಶಾಖಾ ಮಠದಲ್ಲಿ ವಿಜಯದಶಮಿಯಂದು ಸಾಂಕೇತಿಕವಾಗಿ ಚೌಡೇಶ್ವರಿ ದೇವಿಯ 28ನೇ ವರ್ಷದ ಮುಳ್ಳುಗದ್ದಿಗೆ ಉತ್ಸವದ ನಂತರ ನಡೆದ ಧಾರ್ಮಿಕ ಸಮಾರಂಭದಲ್ಲಿ ಅವರು ಮಾತನಾಡಿದರು.
ಕೊರೊನಾ ದಿನಗಳಲ್ಲಿ ಜನರ ಭಕ್ತಿ ನೋಡಿದರೆ ಆಶ್ವರ್ಯವಾಗುತ್ತದೆ. ದೇವಸ್ಥಾನಗಳು, ಮಠ-ಮಂದಿರಗಳನ್ನು ಮುಚ್ಚಿದರೂ ಮನೆ ಮನೆಗಳಲ್ಲಿ ದೇವಾಲಯಗಳು ಪ್ರಾರಂಭವಾಗಿವೆ. ಆಚಾರ-ವಿಚಾರಗಳು ಪುನರಾರ್ವನೆಯಾಗಿರುವುದು ಸಂತೋಷದ ಸಂಗತಿ. ಜಗತ್ತಿನ ಸೃಷ್ಟಿಕರ್ತ ಪರಮಾತ್ಮನಾದ್ದರಿಂದ ಮನುಷ್ಯನಾದವನು ದಾನ, ಧರ್ಮದಿಂದ ಬದುಕಬೇಕು ಎಂದರು.
ವಿಜ್ಞಾನ ಎಷ್ಟೇ ಮುಂದುವರಿದರೂ ಜ್ಞಾನವೆಂಬುದು ಮಸುಕಾಗಿದೆ. ಪ್ರಕೃತಿಯ ಮುಂದೆ ಮನುಷ್ಯ ಕ್ಷಣಿಕನಾಗಿದ್ದಾನೆ. ಅಂತಃಕರಣ ಶುದ್ಧಿಗೊಂಡರೆ ಮತ್ತಷ್ಟು ಶಕ್ತಿ ಪಡೆಯಬಹುದು. ಮನುಷ್ಯನ ಪಯಣ ಯಾವಾಗಲೂ ಒಳ್ಳೆಯ ದಿಕ್ಕಿನಲ್ಲಿ ಸಾಗಬೇಕು. ಕೊರೊನಾ ದಿನಗಳಲ್ಲಿ ಹಬ್ಬ ಮಾಡುವುದು ಕಷ್ಟದ ಕೆಲಸ. ಭಕ್ತರು ಭಕ್ತಿ– ಭಾವದಿಂದ ಮೈಮರೆಯದೇ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.
ಆದಿಚುಂಚನಗಿರಿ ಮಠದ ವ್ಯವಾಸ್ಥಾಪಕ ನಿರ್ದೇಶಕ ಡಾ.ಪ್ರಕಾಶನಾಥ ಸ್ವಾಮೀಜಿ, ಮಂಗಳೂರಿನ ಶಾಖಾ ಮಠದ ಧರ್ಮಪಾಲನಾಥ ಸ್ವಾಮೀಜಿ, ಮೈಸೂರು ಶಾಖಾ ಮಠದ ಮಂಜುನಾಥ ಸ್ವಾಮೀಜಿ, ದಸರೀಘಟ್ಟದ ಚಂದ್ರಶೇಖರನಾಥ ಸ್ವಾಮೀಜಿ, ನಾರಾಯಣನಾಥ ಸ್ವಾಮೀಜಿ, ಚೈತನ್ಯನಾಥ ಸ್ವಾಮೀಜಿ, ಹುಳಿಮಾವು ಶಾಖಾಮಠ ಶೈಲನಾಥ ಸ್ವಾಮೀಜಿ, ನಿವೃತ್ತ ಪೊಲೀಸ್ ಅಧಿಕಾರಿ ರಾಮಕೃಷ್ಣಪ್ಪ, ಡಾ.ಜಿತೇಂದ್ರ, ಡಿವೈಎಸ್ಪಿ ಚಂದನ್ ಕುಮಾರ್, ಗುಡಿಗೌಡರು ಹುಚ್ಚೇಗೌಡರು, ಶ್ರೀಧರಶಾಸ್ತ್ರೀ ಹೊಳಗೆರಹಳ್ಳಿ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.