ತುಮಕೂರು: ಗ್ರಾಹಕರಿಗೆ ಪಡಿತರ ವಿತರಿಸದ ಹಿನ್ನೆಲೆಯಲ್ಲಿ ನಗರದ ಚಿಕ್ಕಪೇಟೆಯ ಪಡಿತರ ವಿತರಣೆ ಅಂಗಡಿಯ (ಸಂಖ್ಯೆ 250) ಪರವಾನಗಿಯನ್ನು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ರದ್ದುಗೊಳಿಸಿದ್ದಾರೆ.
ಈ ಅಂಗಡಿ ಮಾಲೀಕರು ಏ.7ರಂದು ತಾಲ್ಲೂಕು ಟಿಎಪಿಸಿಎಂಎಸ್ ಸಗಟು ಮಳಿಗೆಯಿಂದ ಪಡಿತರ ಎತ್ತುವಳಿ ಮಾಡಿದ್ದರು. ಆದರೆ ಏ.9ರ ಮಧ್ಯಾಹ್ನದವರೆಗೂ ಗ್ರಾಹಕರಿಗೆ ವಿತರಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಕ್ರಮ ಜರುಗಿಸಲಾಗಿದೆ.
‘ಜಿಲ್ಲೆಯ ಎಲ್ಲ ಪಡಿತರ ಅಂಗಡಿಯವರು ಪಡಿತರ ಎತ್ತುವಳಿಯಾದ ಕೂಡಲೇ ವಿತರಣೆ ಪ್ರಾರಂಭಿಸಬೇಕು. ಸರ್ಕಾರ ನಿಗದಿಪಡಿಸಿರುವ ಪ್ರಮಾಣದಂತೆ ಪದಾರ್ಥಗಳನ್ನು ಏಪ್ರಿಲ್ ಅಂತ್ಯದವರೆಗೆ ವಿತರಿಸಬೇಕು. ಪಡಿತರ ಪದಾರ್ಥಗಳಲ್ಲದೆ ಬೇರೆ ಪದಾರ್ಥಗಳನ್ನು ಖರೀದಿಸುವಂತೆ ಗ್ರಾಹಕರನ್ನು ಒತ್ತಾಯಿಸಬಾರದು. ಹಣ ಪಡೆಯಬಾರದು ಎಂದು ಸೂಚಿಸಿದ್ದಾರೆ.
ಸಾಮಾಜಿಕ ಅಂತರ ಕಾಯ್ದುಕೊಂಡು ಬೆಳಿಗ್ಗೆ 7ರಿಂದ ರಾತ್ರಿ 9ರವರೆಗೆ ನಿರಂತರವಾಗಿ ಪಡಿತರ ವಿತರಿಸಬೇಕು. ವಿತರಣೆಗೆ ಸಂಬಂಧಿಸಿದಂತೆ ದೂರುಗಳು ಬಂದರೆ ಆ ಅಂಗಡಿಯ ಪರವಾನಗಿ ರದ್ದುಪಡಿಸಲಾಗುವುದು ಎಂದಿದ್ದಾರೆ.
ವಿತರಣೆಯಲ್ಲಿ ತೊಂದರೆಯಾದರೆ ಆಯಾ ತಾಲ್ಲೂಕಿನ ಆಹಾರ ಶಾಖೆಯ ಶಿರಸ್ತೇದಾರ್, ಆಹಾರ ನಿರೀಕ್ಷಕರನ್ನು ಸಂಪರ್ಕಿಸಬೇಕು ಎಂದು ಸೂಚಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.