ADVERTISEMENT

ಗಣರಾಜ್ಯೋತ್ಸವಕ್ಕೆ ಮಾಜಿ ಸೈನಿಕರಿಗೆ ನೀಡದ ಆಹ್ವಾನ: ತುಮಕೂರು ಡಿ.ಸಿ. ಕ್ಷಮೆಯಾಚನೆ

​ಪ್ರಜಾವಾಣಿ ವಾರ್ತೆ
Published 26 ಜನವರಿ 2020, 12:41 IST
Last Updated 26 ಜನವರಿ 2020, 12:41 IST

ತುಮಕೂರು: ಜಿಲ್ಲಾಡಳಿತ ಆಯೋಜಿಸಿದ್ದ ಗಣರಾಜ್ಯೋತ್ಸವಕ್ಕೆ ಆಹ್ವಾನ ನೀಡಿಲ್ಲವೆಂದು ತುಮಕೂರು ಜಿಲ್ಲಾ ಮಾಜಿ ಸೈನಿಕರ ಸಮನ್ವಯ ಸಮಿತಿಯ ಸದಸ್ಯರು ಸಚಿವ ಜೆ.ಸಿ.ಮಾಧುಸ್ವಾಮಿ ಅವರ ಎದುರು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿ ನಡೆಸುತ್ತಿದ್ದ ಸಚಿವರು ಪಕ್ಕದಲ್ಲಿದ್ದ ಜಿಲ್ಲಾಧಿಕಾರಿ ಕೆ.ರಾಕೇಶ್‌ ಕುಮಾರ್‌ ಅವರತ್ತ ಕಣ್ಣು ತಿರುಗಿಸಿ, ವಿಚಾರಿಸಿದರು.

ಜಿಲ್ಲಾಧಿಕಾರಿ,‘ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಲ್ಲಿ ಆಹ್ವಾನ ನೀಡುವವರು ಮತ್ತು ಉಪಚರಿಸುವವರ ತಂಡ ಇದೆ. ಅವರನ್ನು ವಿಚಾರಿಸುತ್ತೇನೆ’ ಎಂದು ಸಮಜಾಯಿಸಿ ನೀಡಿದರೂ, ಮಾಜಿ ಸೈನಿಕರು ಸಮಾಧಾನಗೊಳ್ಳಲಿಲ್ಲ.

ADVERTISEMENT

ಸಚಿವರು ಕಾರು ಹತ್ತಲು ಹೋಗುವಾಗಲು ಮಾಜಿ ಸೈನಿಕರು ದೂರುತ್ತಲೇ ಇದ್ದರೂ, ಆಗ ಕೆ.ರಾಕೇಶ್‌ ಕುಮಾರ್‌,‘ಈ ಬಾರಿ ಏನೋ ನಮ್ಮಿಂದ ತಪ್ಪಾಗಿದೆ. ದಯವಿಟ್ಟು ಕ್ಷಮಿಸಿಬಿಡಿ. ಮುಂದಿನ ಬಾರಿ ಈ ರೀತಿ ಆಗದಂತೆ ನೋಡಿಕೊಳ್ಳುತ್ತೇವೆ’ ಎಂದು ವಿನಯಪೂರ್ವಕವಾಗಿ ಹೇಳಿದರು.

ಸಮಿತಿಯ ಕಾರ್ಯದರ್ಶಿ ಸಾರ್ಜೆಂಟ್‌ ಸಿ.ಪಾಂಡುರಂಗ, ‘ರಾಷ್ಟ್ರೀಯ ಹಬ್ಬಗಳಿಗೆ ನಮ್ಮನ್ನು ಆಹ್ವಾನಿಸುವ ಪರಿಪಾಠ ಮೊದಲಿನಿಂದಲೂ ಇತ್ತು. ಆದರೆ, ಕಳೆದ ಸ್ವಾತಂತ್ರ್ಯ ದಿನ ಮತ್ತು ಈ ಬಾರಿಯ ಗಣರಾಜ್ಯೋತ್ಸವಕ್ಕೂ ನಮಗೆ ಆಹ್ವಾನ ನೀಡಿಲ್ಲ’ ಎಂದು ತೀವ್ರ ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.