ADVERTISEMENT

ನಂದಿಹಳ್ಳಿ– ಮಲ್ಲಸಂದ್ರ ರಸ್ತೆಗೆ ಗೌರಿಶಂಕರ್ ವಿರೋಧ

ಯೋಜನೆ ಕೈ ಬಿಡುವಂತೆ ಸಚಿವ ಜಿ.ಪರಮೇಶ್ವರಗೂ ಒತ್ತಾಯ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2026, 6:31 IST
Last Updated 22 ಫೆಬ್ರುವರಿ 2026, 6:31 IST
ತುಮಕೂರಿನಲ್ಲಿ ಶನಿವಾರ ರೈತರ ವಿಚಾರ ಮಂಥನ ಸಭೆಯಲ್ಲಿ ಮಾಜಿ ಶಾಸಕ ಡಿ.ಸಿ.ಗೌರಿಶಂಕರ್ ಮಾತನಾಡಿದರು. ಮುಖಂಡರಾದ ಭೈರಸಂದ್ರ ರಮೇಶ್, ಹೊಸಹಳ್ಳಿ ಲಿಂಗರಾಜು, ಪಾಲನೇತ್ರಯ್ಯ ಇತರರು ಉಪಸ್ಥಿತರಿದ್ದರು
ತುಮಕೂರಿನಲ್ಲಿ ಶನಿವಾರ ರೈತರ ವಿಚಾರ ಮಂಥನ ಸಭೆಯಲ್ಲಿ ಮಾಜಿ ಶಾಸಕ ಡಿ.ಸಿ.ಗೌರಿಶಂಕರ್ ಮಾತನಾಡಿದರು. ಮುಖಂಡರಾದ ಭೈರಸಂದ್ರ ರಮೇಶ್, ಹೊಸಹಳ್ಳಿ ಲಿಂಗರಾಜು, ಪಾಲನೇತ್ರಯ್ಯ ಇತರರು ಉಪಸ್ಥಿತರಿದ್ದರು   

ತುಮಕೂರು: ನಂದಿಹಳ್ಳಿ– ಮಲ್ಲಸಂದ್ರ– ವಸಂತನರಸಾಪುರ ಹೊರ ವರ್ತುಲ ರಸ್ತೆ ನಿರ್ಮಾಣದಿಂದ ಹಿಂದೆ ಸರಿಯುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಘೋಷಿಸಿದ್ದರೆ, ಕಾಂಗ್ರೆಸ್ ಮಾಜಿ ಶಾಸಕ ಡಿ.ಸಿ.ಗೌರಿಶಂಕರ್ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

‘ಈ ಹೋರಾಟದಿಂದ ನನ್ನ ರಾಜಕೀಯ ಜೀವನಕ್ಕೆ ಕುಂದುಂಟಾದರೂ ಹೆದರುವ ಪ್ರಶ್ನೆಯೇ ಇಲ್ಲ. ರೈತರ ಪರವಾಗಿ ನಿಲ್ಲುತ್ತೇನೆ. ಹೋರಾಟ ಮುಂದುವರಿಸುತ್ತೇನೆ’ ಎಂದು ಗೌರಿಶಂಕರ್ ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಸ್ಪಷ್ಟಪಡಿಸಿದರು.

ಸಚಿವ ಜಿ.ಪರಮೇಶ್ವರ, ಸಂಸದರೂ ಆದ ಕೇಂದ್ರ ಸಚಿವ ವಿ.ಸೋಮಣ್ಣ ಈ ಯೋಜನೆ ಕೈ ಬಿಡಬೇಕು. ಗುಬ್ಬಿ– ದಾಬಸ್‌ಪೇಟೆ ವರೆಗೆ ಈಗಾಗಲೇ 100 ಅಡಿಗಳ ನಕಾಶೆ ರಸ್ತೆ ಇದೆ. ಅದನ್ನೇ ಅಭಿವೃದ್ಧಿಪಡಿಸಬೇಕು ಎಂದು ಆಗ್ರಹಿಸಿದರು.

ADVERTISEMENT

‘ಭೂ ಮಾಫಿಯಾ ಕಪಿಮುಷ್ಠಿಗೆ ಸಿಲುಕಿ ರಿಂಗ್ ರಸ್ತೆ ಬದಲು ‘ಜಿಗ್‌ಜಾಗ್’ ಮಾದರಿಯಲ್ಲಿ ರಸ್ತೆ ನಿರ್ಮಾಣ ಮಾಡಲು ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲಾಗಿದೆ. ಸರ್ಕಾರ ದಬ್ಬಾಳಿಕೆ, ದೌರ್ಜನ್ಯದಿಂದ ರೈತರ ಫಲವತ್ತಾದ ಭೂಮಿಯನ್ನು ಕಿತ್ತುಕೊಳ್ಳಲು ಮುಂದಾಗಿದೆ’ ಎಂದು ಆರೋಪಿಸಿದರು.

ನಿಯಮದ ಪ್ರಕಾರ ಒಂದು ಯೋಜನೆಗೆ ಭೂ ಸ್ವಾಧೀನ ಮಾಡಿಕೊಳ್ಳುವ ಮುನ್ನ ಶೇ 80ರಷ್ಟು ರೈತರ ಒಪ್ಪಿಗೆ ಪಡೆಯಬೇಕು. ಆದರೆ ಇಲ್ಲಿ ಗ್ರಾಮಸಭೆ ನಡೆಸದೆ, ರೈತರೊಂದಿಗೆ ಸಮಾಲೋಚಿಸದೆ, ಸಾಮಾಜಿಕ ಪರಿಣಾಮ ಲೆಕ್ಕ ಹಾಕದೆ, ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ದೂರಿದರು.

ಈ ಯೋಜನೆ ವ್ಯಾಪ್ತಿಯಲ್ಲಿ ಬರುವ 26 ಹಳ್ಳಿಗಳ 750ಕ್ಕೂ ಹೆಚ್ಚು ರೈತರ 700 ಎಕರೆಗೂ ಹೆಚ್ಚು ಭೂ ಸ್ವಾಧೀನಕ್ಕೆ ಗುರುತಿಸಲಾಗಿದೆ. ಶೇ 70ರಷ್ಟು ಪ್ರದೇಶ ಒಣಭೂಮಿ ಎಂದು ಡಿಪಿಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಆದರೆ ವಾಸ್ತವದಲ್ಲಿ ಶೇ 80ರಷ್ಟು ಪ್ರದೇಶದಲ್ಲಿ ತೆಂಗು, ಅಡಿಕೆ, ಮಾವು ಇತರ ಬೆಳೆ ಬೆಳೆಯಲಾಗಿದೆ ಎಂದರು.

ಮುಖಂಡರಾದ ಭೈರಸಂದ್ರ ರಮೇಶ್, ಪಾಲನೇತ್ರಯ್ಯ, ಹೊಸಹಳ್ಳಿ ಲಿಂಗರಾಜು, ಹೆತ್ತೇನಹಳ್ಳಿ ಮಂಜುನಾಥ್, ನರಸಿಂಹಯ್ಯ, ರಾಜಶೇಖರ್, ಸುರೇಶ್, ಪ್ರಕಾಶ್ ಇತರರು ಉಪಸ್ಥಿರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.