ADVERTISEMENT

ಮಾನವನ ದುರಾಸೆಯಿಂದ ಜೀವ ಸಂಕುಲ ನಾಶ

ವಿವಿಯಲ್ಲಿ ನಡೆದ ಸಾಕ್ಷ್ಯಚಿತ್ರ, ಸಂವಾದ ಕಾರ್ಯಕ್ರಮದಲ್ಲಿ ಎಂ.ಶಮಾ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2019, 16:32 IST
Last Updated 22 ಏಪ್ರಿಲ್ 2019, 16:32 IST
ಸಂವಾದ ಕಾರ್ಯಕ್ರಮದಲ್ಲಿ ಜ್ಞಾನ ಸಿಂಧೂ ಸ್ವಾಮಿ ಮಾತನಾಡಿದರು. ಎಂ.ಶಮಾ ಇದ್ದಾರೆ
ಸಂವಾದ ಕಾರ್ಯಕ್ರಮದಲ್ಲಿ ಜ್ಞಾನ ಸಿಂಧೂ ಸ್ವಾಮಿ ಮಾತನಾಡಿದರು. ಎಂ.ಶಮಾ ಇದ್ದಾರೆ   

ತುಮಕೂರು: ಮಾನವನ ದುರಾಸೆಗಳಿಗೆ ಜೀವ ಸಂಕುಲ ಹಾಗೂ ಭೂಮಿಗೆ ಹಾನಿಯಾಗಿ ಜೀವ ವೈವಿಧ್ಯದಲ್ಲಿ ಏರುಪೇರಾಗುತ್ತಿದೆ ಎಂದು ಪರಿಸರಸ್ನೇಹಿ ವಸ್ತ್ರ ವಿನ್ಯಾಸಕಿ ಎಂ.ಶಮಾ ತಿಳಿಸಿದರು.

ತುಮಕೂರು ವಿಶ್ವವಿದ್ಯಾನಿಲಯದಲ್ಲಿ ವಿವಿಯ ಸಮಾಜಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಸ್ನಾತಕೊತ್ತರ ಪರಿಸರ ವಿಜ್ಞಾನ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಹಾಗೂ ಸಿಜ್ಞಾ ಯುವ ಸಂವಾದ ಕೇಂದ್ರವು ಭೂಮಿ ದಿನದ ಅಂಗವಾಗಿ ಆಯೋಜಿಸಿದ್ದ ಸಾಕ್ಷ್ಯಚಿತ್ರ ಪ್ರದರ್ಶನ ಮತ್ತು ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಂದು ಭೂಮಿಯ ಸ್ಥಿತಿ ಚಿಂತಾಜನಕವಾಗಿದ್ದು ಅಸಮತೋಲನ ಎದುರಾಗಿದೆ. ಹಾಗಾಗಿ ಮಾನವನು ಜೀವ ಜ್ಞಾನವನ್ನು ಪಡೆಯುವಲ್ಲಿ ವಿಫಲನಾಗುತ್ತಿದ್ದಾನೆ ಎಂದರು.

ADVERTISEMENT

ನಿಸರ್ಗಕ್ಕೆ ಬೇಕಿರುವ ಆಹಾರವನ್ನು ತಾನಾಗೆ ತಯಾರಿಸಿಕೊಳ್ಳುತ್ತದೆ. ಆದರೆ, ಮನುಷ್ಯ ಅವುಗಳನ್ನು ಬದಲಾಯಿಸುತ್ತಿರುವುದು ಸೃಷ್ಟಿಗೆ ವಿರುದ್ಧವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ವಿವಿಯ ಕುಲಪತಿ ಪ್ರೊ.ವೈ.ಎಸ್‌.ಸಿದ್ದೇಗೌಡ ಅವರು, ‘ಮಾನವನು ಮಾಡಿದ ತಪ್ಪುಗಳನ್ನು ಪುನಃ ಮಾಡುವುದರಿಂದ ಜೀವ ಸಂಕುಲಕ್ಕೆ ಹಾಗೂ ಭೂಮಿಯ ಮೇಲೆ ವ್ಯತಿರಿಕ್ತವಾದ ಪರಿಣಾಮ ಉಂಟಾಗುತ್ತಿದೆ’ ಎಂದರು.

ಬದಲಾವಣೆ ಜಗದ ನಿಯಮ ಆದರೆ ನಮ್ಮ ಜೀವನ ಬದಲಾವಣೆಯಿಂದ ಯಾವುದೇ ಜೀವಿಗಳಿಗೆ ಹಾಗೂ ಭೂಮಿಗೆ ಯಾವುದೇ ರೀತಿಯ ತೊಂದರೆಯಾಗಬಾರದು ಎಂದರು.

ಭೂಮಿ ಇಂದು ಅತ್ಯಂತ ಕ್ಲಿಷ್ಟಕರವಾದ ಸಂದಿಗ್ಧ ಪರಿಸ್ಥಿತಿಯಲ್ಲಿದೆ. ಹಾಗಾಗಿ ಯುವಜನರು ಎಚ್ಚೆತ್ತುಕೊಂಡು ಸಮತೋಲನ ಕಾಪಾಡಬೇಕಾಗಿದೆ. ಇಲ್ಲವಾದಲ್ಲಿ ಮನುಷ್ಯನಿಗೆ ಉಳಿಗಾಲವಿಲ್ಲ ಎಂದು ಹೇಳಿದರು.

ಇರುವ ಸಂಪನ್ಮೂಲವನ್ನು ಸಮತೋಲನದಲ್ಲಿ ಬಳಕೆ ಮಾಡಿಕೊಂಡು ಘನತೆಯುಳ್ಳ ವ್ಯಕ್ತಿಯಾಗಬೇಕು. ಪರಿಸರದ ಬಗ್ಗೆ ಇಚ್ಛಾಶಕ್ತಿ ಕಡಿಮೆಯಾಗುತ್ತಿರುವುದು ದುರಂತ ಎಂದು ಆತಂಕ ವ್ಯಕ್ತಪಡಿಸಿದರು.

ಸಮಾಜ ಕಾರ್ಯ ಅಧ್ಯಯನ ವಿಭಾಗದ ಅಧ್ಯಕ್ಷ ಕೆ.ಜಿ.ಪರಶುರಾಮ, ಪರಿಸರ ಅಧ್ಯಯನ ವಿಭಾಗ ಸಂಯೋಜಕ ಡಾ.ರಾಜನಾಯ್ಕ, ಸಿಜ್ಞಾ ಯುವ ಸಂವಾದ ಕೇಂದ್ರದ ಸಂಯೋಜಕಿ ಕಾವ್ಯಶ್ರೀ ಬೆಟ್ಟದಬಯಲು ಹಾಗೂ ಚಂದ್ರಕಾಂತ ಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.