ತುಮಕೂರು: ದೇವರಾಯನದುರ್ಗದ ಯೋಗ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯದಲ್ಲಿ ಶನಿವಾರ ಧಾರ್ಮಿಕ ಆಚರಣೆಗಳ ಕಲರವವೇ ಮೇಳೈಸಿತ್ತು. ಮಂತ್ರಾಲಯ ಮಠದ ಸುಭುದೇಂದ್ರ ತೀರ್ಥ ಸ್ವಾಮೀಜಿ ಮಾರ್ಗದರ್ಶನದಲ್ಲಿ ನಡೆದ ಕುಂಭಾಭಿಷೇಕಕ್ಕೆ ಭಕ್ತಗಣವೇ ಹರಿದು ಬಂದಿತ್ತು.
ಶನಿವಾರ ಬೆಳಿಗ್ಗೆ ನಡೆದ ಕಲಶಾರಾಧನೆ, ಪ್ರಧಾನ ಹೋಮಗಳು, ಪೂರ್ಣಾಹುತಿಗೆ ಭಕ್ತರು ಸಾಕ್ಷಿಯಾದರು. ಬಳಿಕ ನೆರವೇರಿದ ವಿಮಾನಗೋಪುರ ಮತ್ತು ರಾಜಗೋಪುರ ಕುಂಭಾಭಿಷೇಕ, ಬಲಿಪ್ರಧಾನ, ಮಹಾನಿವೇದನೆ, ಮಹಾಮಂಗಳಾರತಿಯಲ್ಲೂ ಜನರು ಪಾಲ್ಗೊಂಡರು.
ರಾಘವೇಂದ್ರ ಸ್ವಾಮೀಜಿ ಸೇರಿದಂತೆ ಮಂತ್ರಾಲಯದ ಪೀಠಾಧಿಪತಿಗಳು ದೇವರಾಯನದುರ್ಗದ ಕರಿಗಿರಿ ಕ್ಷೇತ್ರಕ್ಕೆ ಭೇಟಿ ನೀಡಿದ ಉಲ್ಲೇಖ ಮಠದ ಇತಿಹಾಸದಲ್ಲಿ ಇದೆ ಎಂದು ಸುಭುದೇಂದ್ರ ತೀರ್ಥ ಸ್ವಾಮೀಜಿ ತಿಳಿಸಿದರು.
ದೇವಾಲಯದ ಕಾರ್ಯನಿರ್ವಾಹಣಾಧಿಕಾರಿ ಎಚ್.ಸವಿತಾ, ಧಾರ್ಮಿಕ ಕಾರ್ಯಗಳು ಸುಸೂತ್ರವಾಗಿ ನಡೆದವು. ವಾಸ್ತು ಆರಾಧನೆ, ಕಳಸ ಸ್ಥಾಪನ ಮಹಾನಿವೇದನ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಅಚ್ಚುಕಟ್ಟಾಗಿ ನಡೆದವು ಎಂದು ತಿಳಿಸಿದರು.
ತಹಶೀಲ್ದಾರ್ ಮೋಹನ್, ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಊರ್ಡಿಗೆರೆ ಕರಿಗಿರಿಯಪ್ಪ, ಅರ್ಚಕರಾದ ಡಿ.ಎನ್.ನರಸಿಂಹಭಟ್ಟ, ಆಗಮಿಕ ವಾಸುದೇವಭಟ್ಟ, ಪ್ರಧಾನ ಅರ್ಚಕರಾದ ವೆಂಕಟರಾಜು ಭಟ್ಟ, ಡಿ.ಕೆ.ಲಕ್ಷ್ಮಿನಾರಾಯಣಭಟ್ಟ, ಕಂದಾಯಾಧಿಕಾರಿ ಪಿ.ಶಿವಣ್ಣ, ವ್ಯವಸ್ಥಾಪನ ಸಮಿತಿ ಸದಸ್ಯರು ಹಾಗೂ ದೇಗುಲ ಅಭಿವೃದ್ಧಿ ಮಂಡಳಿ ಸದಸ್ಯರು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.